ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಸೆಪ್ಟೆಂಬರ್ 2021
ವಾರಂಟ್ ಕೊಡಲು ತೆರಳಿದ್ದ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಆರೋಪಿಯೊಬ್ಬ ಗ್ಲಾಸ್ ಚೂರುಗಳನ್ನು ನುಂಗಿದ್ದಾನೆ. ಕೂಡಲೆ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿನೋಬನಗರ ಠಾಣೆ ಸಿಬ್ಬಂದಿ ಮಂಜುನಾಥ್ (34) ಅವರನ್ನು ತಳ್ಳಿದ ಆರೋಪಿ ರೂಪೇಶ್ ಗ್ಲಾಸ್ ನುಂಗಿದ್ದಾನೆ.
ಏನಿದು ಪ್ರಕರಣ?
ಪ್ರಕರಣವೊಂದರ ಸಂಬಂಧ ರೂಪೇಶ್ ವಿರುದ್ಧ ವಾರಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿನೋಬನಗರ ಠಾಣೆ ಸಿಬ್ಬಂದಿ ಮಂಜುನಾಥ್ ಅವರು ವಾರಂಟ್ ನೀಡಲು ತೆರಳಿದ್ದರು. ಶುಭಮಂಗಳ ಕಲ್ಯಾಣ ಮಂಟಪ ಬಳಿ ಪೊಲೀಸ್ ಸಿಬ್ಬಂದಿಯನ್ನು ಕಂಡ ರೂಪೇಶ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರನ್ನು ರೂಪೇಶ್ ತಳ್ಳಿದ್ದಾನೆ. ಮಂಜುನಾಥ್ ಅವರು ಪಕ್ಕದ ಚರಂಡಿಗೆ ಬಿದ್ದಿದ್ದು, ತಲೆಗೆ ಗಾಯವಾಗಿದೆ. ಅಷ್ಟೇ ಅಲ್ಲ, ಪಕ್ಕದಲ್ಲಿದ್ದ ಗಾಜು ಒಡೆದು ನುಂಗಿದ ರೂಪೇಶ್ ಕುಸಿದು ಬಿದ್ದಿದ್ದಾನೆ.
ಕೂಡಲೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ. ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರಿಗೆ ಚಿಕಿತ್ಸೆ ನೀಡಿ ವಾರ್ಡ್’ಗೆ ಶಿಫ್ಟ್ ಮಾಡಲಾಗಿದೆ. ಗಾಜು ನುಂಗಿರುವ ರೂಪೇಶ್’ಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಘಟನೆ ಸಂಬಂಧ ವಿನೋಬನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ ಮೂಲಕ ಸುದ್ದಿಗಾಗಿ 7411700200