SHIVAMOGGA LIVE NEWS | CRIME | 28 ಏಪ್ರಿಲ್ 2022
ನಿಧಾನವಾಗಿ ಬೈಕ್ ಚಲಾಯಿಸಿ ಎಂದು ತಿಳಿಸಿದ್ದಕ್ಕೆ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. ಆತನ ಬಳಿ ಇದ್ದ ಮೊಬೈಲ್ ಮತ್ತು ಇತರೆ ವಸ್ತುಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗಿದೆ.
ಊರುಗಡೂರು ವಾಸಿ ವಿಜಯ ಕುಮಾರ್ ಎಂಬುವವರ ಮೇಲೆ ಹಲ್ಲೆಯಾಗಿದೆ. ಎದುರಿನಿಂದ ಯದ್ವಾತದ್ವ ಬೈಕ್ ಚಲಾಯಿಸಿಕೊಂಡು ಬಂದವರಿಗೆ ಬುದ್ದಿ ಮಾತು ಹೇಳಿದ್ದಕ್ಕೆ ಹಲ್ಲೆಯಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಯ ವಿವರ
ವಿಜಯ್ ಕುಮಾರ್ ಅವರು ಗಾಂಧಿ ಬಜಾರ್ ಮಾರ್ಕೆಟ್’ಗೆ ಹೋಗಲು ಎಂಕೆಕೆ ರಸ್ತೆ ಮಾರ್ಗವಾಗಿ ಮೆಹಬೂಬ ಗಲ್ಲಿ ಮೂಲಕ ಬೈಕಿನಲ್ಲಿ ತೆರಳುತ್ತಿದ್ದರು. ಆಗ ಎದುರಿನಿಂದ ಇಬ್ಬರು ವೇಗವಾಗಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾರೆ. ವಿಜಯ್ ಕುಮಾರ್ ಅವರ ಬೈಕಿಗೆ ಡಿಕ್ಕಿ ಹೊಡೆಯವಂತೆ ಮಾಡಿದ್ದಾರೆ. ನಿಧಾನವಾಗಿ ಬೈಕ್ ಚಲಾಯಿಸಿ ಎಂದು ವಿಜಯ್ ಕುಮಾರ್ ಅವರು ಬುದ್ದಿ ಮಾತು ಹೇಳಿದ್ದಾರೆ.
ಇಬ್ಬರ ಜೊತೆ ಮತ್ತಿಬ್ಬರಿಂದ ಹಲ್ಲೆ
ಸಿಟ್ಟಾದ ಬೈಕ್ ಸವಾರರು ವಿಜಯ್ ಕುಮಾರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅಲ್ಲೆ ಇದ್ದ ಮತ್ತಿಬ್ಬರು ಕೂಡ ಅವರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ವಿಜಯ್ ಕುಮಾರ್ ಅವರ ಬಳಿ ಇದ್ದ ಮೊಬೈಲ್ ಮತ್ತು ಇತರೆ ವಸ್ತುಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ.
ಹಲ್ಲೆಕೋರರಿಂದ ವಿಜಯ್ ಕುಮಾರ್ ತಪ್ಪಿಸಿಕೊಂಡಿದ್ದಾರೆ. ಸಾರ್ವಜನಿಕರು ಜಗಳ ಬಿಡಿಸಲು ಮುಂದಾಗಿದ್ದು, ಹಲ್ಲೆ ಮಾಡಿದ ಯುವಕರು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ವಿಜಯ್ ಕುಮಾರ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ನಾಲ್ವರ ಪತ್ತೆ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ – ಆಲ್ಕೊಳ ಸರ್ಕಲ್’ನಲ್ಲಿ ತಪ್ಪಿತು ದುರಂತ, ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಗುವಿನ ಪ್ರಾಣ