SHIVAMOGGA LIVE NEWS | SHIMOGA FM | 22 ಏಪ್ರಿಲ್ 2022
ಪ್ರಯಾಣಿಕನೊಬ್ಬ ಆಟೋದಲ್ಲಿ ಸಿಕ್ಕ ಮೊಬೈಲನ್ನು ಆಟೋ ಚಾಲಕನಿಗೆ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಮೊಬೈಲ್ ಕಳೆದುಕೊಂಡಿದ್ದ ವೈದ್ಯರಿಗೆ ಆ ಮೊಬೈಲ್ ತಲುಪಿಸಲಾಗಿದೆ. ಆಟೋ ಚಾಲಕನ ಸಮಯ ಪ್ರಜ್ಞೆ ಮತ್ತು ಪ್ರಮಾಣಿಕತೆಯಿಂದಾಗಿ ಮೊಬೈಲ್ ಫೋನ್ ವಾರಸುದಾರರ ಕೈ ಸೇರಿದೆ.
ಗಡಿಬಿಡಿಯಲ್ಲಿ ಮೊಬೈಲ್ ಬಿಟ್ಟರು
ಸ್ವಾಮಿ ಎಂಬುವವರ ಆಟೋದಲ್ಲಿ ವೈದ್ಯರೊಬ್ಬರು ಖಾಸಗಿ ಬಸ್ ನಿಲ್ದಾಣದಿಂದ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜಿಗೆ ತೆರಳಿದ್ದಾರೆ. ಇಳಿಯುವಾಗ ಅವಸರದಲ್ಲಿ ಆಟೋದಲ್ಲೇ ತಮ್ಮ ಮೊಬೈಲ್ ಫೋನ್ ಬೀಳಿಸಿಕೊಂಡಿದ್ದರು.
ಆಟೋ ಚಾಲಕ ಸ್ವಾಮಿ ಅವರು ಇದನ್ನು ಗಮನಿಸದೆ ಬಸ್ ನಿಲ್ದಾಣದ ಕಡೆಗೆ ಮರಳುತ್ತಿದ್ದರು. ಆಗ ಮತ್ತೊಬ್ಬ ಪ್ರಯಾಣಿಕ ಆಟೋ ಹತ್ತಿದ್ದಾನೆ. ಆಟೋದಲ್ಲಿ ಬಿದ್ದಿದ್ದ ಮೊಬೈಲ್ ಫೋನನ್ನು ಎತ್ತಿಕೊಂಡಿದ್ದಾನೆ. ಅಲ್ಲದೆ ಆಟೋ ಚಾಲಕ ಸ್ವಾಮಿ ಅವರಿಗೆ ಅದನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ.
ಆಟೋ ಚಾಲಕನ ಸಮಯ ಪ್ರಜ್ಞೆ
ಇನ್ನು, ಆಟೋ ಚಾಲಕ ಸ್ವಾಮಿ ಅವರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಮೊಬೈಲ್ ಲಾಕ್ ಓಪನ್ ಮಾಡುವಂತೆ ಪ್ರಯಾಣಿಕನಿಗೆ ತಿಳಿಸಿದ್ದಾರೆ. ಆತ ಮೊಬೈಲ್ ಲಾಕ್ ಓಪನ್ ಮಾಡಲು ವಿಫಲವಾಗಿದ್ದಾನೆ. ಆಟೋವನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದರಿಂದ ಹೆದರಿದ ಪ್ರಯಾಣಿಕ, ಮೊಬೈಲ್ ನಿಮ್ಮ ಆಟೋದಲ್ಲೇ ಸಿಕ್ಕಿದ್ದು ಎಂದು ಒಪ್ಪಿಕೊಂಡಿದ್ದಾನೆ. ವಿಚಾರ ತಿಳಿಯುತ್ತಿದ್ದ ಹಾಗೆ ಚಾಲಕ ಸ್ವಾಮಿ ಅವರು ಕನ್ನಡಿಗರ ಆಟೋ ಚಾಲಕ ಸಂಘದ ಅಧ್ಯಕ್ಷ ಜಯಣ್ಣ ಅವರಿಗೆ ವಿಚಾರ ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಪ್ರಕರಣ
ಆಟೋದಲ್ಲಿ ಮೊಬೈಲ್ ಸಿಕ್ಕ ವಿಚಾರವನ್ನು ಆಟೋ ಚಾಲಕರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ತಿಳಿಸಿದ್ದಾರೆ. ಅಷ್ಟು ಹೊತ್ತಿಗೆ ಮೊಬೈಲ್ ಕಳೆದುಕೊಂಡಿದ್ದ ವೈದ್ಯರು ಬಸ್ ನಿಲ್ದಾಣದ ಬಳಿ ಆಟೋಗಾಗಿ ಹುಡುಕುತ್ತಿದ್ದರು. ಚಾಲಕ ಸ್ವಾಮಿ ಅವರು ವೈದ್ಯರನ್ನು ಗುರುತಿಸಿ, ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಮೊಬೈಲ್ ವಾಪಸ್ ನೀಡಿದ್ದಾರೆ.
ಆಟೋ ಚಾಲಕ ಸ್ವಾಮಿ ಅವರ ಸಮಯ ಪ್ರಜ್ಞೆ ಮತ್ತು ಪ್ರಮಾಣಿಕತೆಯಿಂದಾಗಿ ವೈದ್ಯರಿಗೆ ತಮ್ಮ ಮೊಬೈಲ್ ಸಿಕ್ಕಂತಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಕ್ಲಬ್ ಮೇಲೆ ದಾಳಿ, ಕಾರ್ಪೊರೇಟರ್ ಪತಿ, ಮಾಜಿ ಕಾರ್ಪೊರೇಟರ್ ಸೇರಿ ಹಲವರು ವಶಕ್ಕೆ