ಶಿವಮೊಗ್ಗ ಲೈವ್.ಕಾಂ | SHIMOGA NEWS | 29 NOVEMBER 2020
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನಾ ಶ್ರೀನಿವಾಸ್ ಅವರು ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಇಲ್ಲ ಎಂದು ಅಧ್ಯಕ್ಷ ಟಿ.ಡಿ.ಮೇಘರಾಜ್ ತಿರುಗೇಟು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ರೈಲ್ವೆ ಕೋಚಿಂಗ್ ಟರ್ಮಿನಲ್ಗೆ ಸಂಬಂಧಿಸಿದಂತೆ ತೀ.ನಾ.ಶ್ರೀನಿವಾಸ್ ಅವರು ಸಂಸದರನ್ನು ಟೀಕಿಸಿರುವುದಲ್ಲದೇ ಲಘುವಾಗಿ ಮಾತನಾಡಿದ್ದಾರೆ. ರೈಲ್ವೆ ಅಭಿವೃದ್ದಿಗೆ ಸಂಬಂಧಿಸಿದಂತೆ ಸಂಸದರು ಮಾಡಿರುವ ಕೆಲಸವನ್ನು ಅವರು ಮರೆತಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಯನ್ನು ನೀಡುವ ನೈತಿಕತೆ ತೀ.ನಾ.ಶ್ರೀನಿವಾಸ್ ಅವರಿಗೆ ಇಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಾಳಗುಪ್ಪ-ಶಿವಮೊಗ್ಗದ ನಡುವೆ ಬ್ರಾಡ್ಗೇಜನ್ನು ಮಾಡುವ ಬದಲು ರೈಲ್ವೆ ಹಳಿಯನ್ನೇ ತೆಗೆಯಲು ಹೊರಟಿದ್ದರು. ಆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಬಿ.ವೈ.ರಾಘವೇಂದ್ರ ಅವರ ಇಚ್ಚಾಶಕ್ತಿಯಿಂದಾಗಿ ಅದು ಬ್ರಾಡ್ಗೇಜ್ ಆಯಿತು. ಇದನ್ನು ತೀ.ನಾ.ಶ್ರೀನಿವಾಸ್ ತಿಳಿದುಕೊಳ್ಳಬೇಕು ಎಂದರು.
ತಾಳಗುಪ್ಪದಲ್ಲಿ ತಾಂತ್ರಿಕ ಕಾರಣದಿಂದ ಕೋಚಿಂಗ್ ಟರ್ಮಿನಲ್ ಸ್ಥಾಪನೆಯಾಗುತ್ತಿಲ್ಲ. ಅದರ ಬದಲು ಶಿವಮೊಗ್ಗದಲ್ಲಿ ಆಗುತ್ತದೆ. ಆದರೆ ಇದನ್ನು ತೀ.ನಾ.ಶ್ರೀನಿವಾಸ್ ಅರಿತಿಲ್ಲ. ಶಿವಮೊಗ್ಗ -ರಾಣೆಬೆನ್ನೂರು ರೈಲ್ವೆ ಸಂಚಾರ ಆರಂಭವಾದರೆ ಇಲ್ಲಿ ಬರುವ ರೈಲುಗಳು ತಾಳಗುಪ್ಪಕ್ಕೆ ಹೋಗಿಬರಲು ಆಗುವುದಿಲ್ಲ ಮತ್ತು ರೈಲ್ವೆ ಅಧಿಕಾರಿಗಳು ಈಗಾಗಲೇ ವರದಿ ನೀಡಿದ್ದಾರೆ. ಈ ಎಲ್ಲ ಕಾರಣದಿಂದ ಸಾಗರದಿಂದ ಕೋಟೆಗಂಗೂರಿಗೆ ಅದು ಶಿಫ್ಟ್ ಆಗಿದೆ ಅಷ್ಟೆ. ಇದರ ಅರಿವು ಇಲ್ಲದ ಅವರು ಸಂಸದರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ಕೂಡಲೇ ವಾಪಾಸ್ ತೆಗೆದುಕೊಳ್ಳಬೇಕು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಶಿವರಾಜ್, ರಾಮು, ಬಿ.ಕೆ.ಶ್ರೀನಾಥ್, ಎನ್.ಜೆ.ಸತೀಶ್, ಸುನಿತಾ ಅಣ್ಣಪ್ಪ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]