SHIVAMOGGA LIVE | 26 JULY 2023
SHIMOGA : ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ (Black Flag) ಪ್ರದರ್ಶಿಸಿದರು. ಸಭೆ ನಡೆಯುತ್ತಿದ್ದ ಸಭಾಂಗಣದ ಒಳಗೆ ನುಗ್ಗಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆ ಕೂಗಿದರು.
ನೆರೆ ಪರಿಸ್ಥಿತಿ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆಗೆ ಸಚಿವರು ಆಗಮಿಸುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಒಳ ನುಗ್ಗಿದರು.
ಬಿಜೆಪಿ ಕಾರ್ಯಕರ್ತರ ಆಕ್ಷೇಪ ಏನು?
ಪಠ್ಯ ಪುಸ್ತಕ ಪರಿಷ್ಕರಣೆ ಮತ್ತು ಭಗತ್ ಸಿಂಗ್ ಅವರ ಪಾಠವನ್ನು ಕೈಬಿಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಸಚಿವ ಮಧು ಬಂಗಾರಪ್ಪ ವಿರುದ್ಧ ಕಪ್ಪು ಬಾವುಟ (Black Flag) ಪ್ರದರ್ಶಿಸಿ, ಘೋಷಣೆ ಕೂಗಿದರು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಸಭಾಂಗಣದಿಂದ ಹೊರಗೆಳೆದು ವಶಕ್ಕೆ ಪಡೆದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಜೆಸಿಬಿಯಿಂದ ಎಟಿಎಂ ಮೆಷಿನ್ ಹೊತ್ತೊಯ್ಯಲು ಯತ್ನ, ಮಹಾರಾಷ್ಟ್ರ ಮಾದರಿ ದರೋಡೆಗೆ ಪ್ರಯತ್ನ
ಸಚಿವ ಮಧು ತಿರುಗೇಟು
ಇನ್ನು, ಬಿಜೆಪಿ ಕಾರ್ಯಕರ್ತರ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಪ್ರತಿಭಟನಾಕಾರರು ಮೊದಲು ಪಠ್ಯ ಓದಲಿ. ಆನಂತರ ಪ್ರತಿಭಟನೆ ಮಾಡಲಿ. ಪಠ್ಯದಲ್ಲಿ ಬದಲಾವಣೆ ಮಾಡಿರುವುದು ಅವರ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗಲಿದೆ ಎಂದು ತಿರುಗೇಟು ನೀಡಿದರು.