SHIVAMOGGA LIVE NEWS | 19 MARCH 2024
SHIMOGA : ರಾಜ್ಯ ಸರ್ಕಾರ ಕೂಡಲೆ ಟೋಲ್ ಸಂಗ್ರಹ ಕೈ ಬಿಡಬೇಕು ಎಂದು ಆಗ್ರಹಿಸಿ ಖಾಸಗಿ ಬಸ್ ಮಾಲೀಕರು ಕಲ್ಲಾಪುರದ ಟೋಲ್ ಗೇಟ್ ಮುಂದೆ ಬಸ್ಗಳನ್ನು ಅಡ್ಡ ನಿಲ್ಲಿಸಿ ದಿಢೀರ್ ಪ್ರತಿಭಟಿಸಿದರು. ಇದರಿಂದ ಶಿವಮೊಗ್ಗ – ಸವಳಂಗ ಮಧ್ಯೆ ವಾಹನ ಸಂಚಾರ ವ್ಯತ್ಯಯವಾಗಿತ್ತು.
ಶಿವಮೊಗ್ಗ – ಶಿಕಾರಿಪುರ – ಹಾನಗಲ್ ರಾಜ್ಯ ಹೆದ್ದಾರಿಯ ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ಟೋಲ್ ಗೇಟ್ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಖಾಸಗಿ ಬಸ್ ಮಾಲೀಕರಿಗೆ ಹೊರೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೆ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಟೋಲ್ನಿಂದ ಜನರಿಗೆ ತೀವ್ರ ಹೊರೆ
ಶಿವಮೊಗ್ಗ – ಸವಳಂಗ ನಡೆವೆ ಇರುವ ಕಲ್ಲಾಪುರದಲ್ಲಿ ಬಸ್ಗಳನ್ನು ಅಡ್ಡ ನಿಲ್ಲಿಸಿ ಖಾಸಗಿ ಬಸ್ ಮಾಲೀಕರು ಪ್ರತಿಭಟನೆ ನಡೆಸಿದರು. ಅಂತರ ಜಿಲ್ಲೆ ಸಂಪರ್ಕಿಸುವ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನ ನಿತ್ಯ ಸಂಚರಿಸುತ್ತವೆ. ಎರಡು ಟೋಲ್ಗಳ ಅಕ್ಕಪಕ್ಕ ಹತ್ತಾರು ಹಳ್ಳಿಗಳಿವೆ. ರೈತರು ತೋಟ – ಗದ್ದೆಗೆ ತೆರಳಲು ಟೋಲ್ ಪಾವತಿಸಬೇಕಾಗುತ್ತಿದೆ. ಟೋಲ್ ಪಾವತಿಸುವುದಕ್ಕೆ ಪ್ರತಿ ತಿಂಗಳು ಖಾಸಗಿ ಬಸ್ ಮಾಲೀಕರಿಗೆ ಅಂದಾಜು 25 ಸಾವಿರ ರೂ. ಹೆಚ್ಚು ಹೊರೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹೆಚ್ಚುವರಿ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಬೇಕಾಗುತ್ತದೆ. ಬಡವರು ಬಸ್ ಹತ್ತುವುದು ಕಷ್ಟವಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧದ ನಡುವೆ ಟೋಲ್ ಸ್ಥಾಪನೆ
ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ಟೋಲ್ಗಳ ನಿರ್ಮಾಣಕ್ಕೆ ಸ್ಥಳೀಯರು, ರೈತರು, ವಿವಿಧ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಹಿಂದಿನಿಂದಲು ಇರುವ ರಸ್ತೆಗೇ ಟೋಲ್ ಪಾವತಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಖಾಸಗಿ ಬಸ್ ಮಾಲೀಕರು ಬಸ್ಗಳನ್ನು ಅಡ್ಡ ನಿಲ್ಲಿಸಿ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯ 2 ಟೋಲ್ಗಳಲ್ಲಿ ಯಾವ್ಯಾವ ವಾಹನಕ್ಕೆ ಎಷ್ಟು ನಿಗದಿಯಾಗಿದೆ ದರ? ಇಲ್ಲಿದೆ ಲಿಸ್ಟ್