SHIVAMOGGA LIVE NEWS | 28 APRIL 2024
WEATHER REPORT : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಈಗ ಕಾದ ಕಾವಲಿಯಾಗಿದೆ. ದಿನೇ ದಿನೆ ಬಿಸಿಲಿನ ತಾಪ ಏರುತ್ತಿದೆ. ಜನರ ನಿತ್ಯದ ಬದುಕಿನ ಮೇಲೆ ಪರಿಣಾಮ ಉಂಟಾಗಿದೆ. ಬಿಸಿಲಿನ ತಾಪಕ್ಕೆ ಜಿಲ್ಲೆಯ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಅದರ ವಿವರಣೆ.
ಮನೆಯಿಂದ ಹೊರ ಬರುವುದೇ ಕಷ್ಟ
ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ನಿಂದ 40 ಡಿಗ್ರಿ ಸೆಲ್ಸಿಯಸ್ವರೆಗೆ ಇದೆ. ಬೆಳಗ್ಗೆಯಿಂದಲೇ ಬಿಸಲು ರಣಭೀಕರವಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಜನ ಹೊರಗೆ ಬರಲು ಹಿಂದೇಟು ಹಾಕುವ ಸ್ಥಿತಿ ಇದೆ. ಮನೆ, ಕಚೇರಿಯಲ್ಲಿದ್ದರು ಫ್ಯಾನು, ಎಸಿ ಇಲ್ಲದೆ ಸಮಯ ದೂಡುವುದು ಕಷ್ಟವಾಗುತ್ತಿದೆ. ರಾತ್ರಿ ಹೊತ್ತು ವಿಪರೀತ ಶಕೆಗೆ ಜನ ಹೈರಾಣಾಗಿದ್ದಾರೆ.
ಆರೋಗ್ಯದ ಮೇಲೆ ದುಷ್ಪರಿಣಾಮ
ರಣ ಬಿಸಲು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ನಾನಾ ಆರೋಗ್ಯ ಸಮಸ್ಯೆಯಿಂದಾಗಿ ಜನರು ಆಸ್ಪತ್ರೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಭಾರಿ ಬಿಸಿಲಿಗೆ ಮೈ ಒಡ್ಡಬಾರದು. ಹೆಚ್ಚು ನೀರು ಕುಡಿಯಬೇಕು. ಇದರಿಂದ ದೇಹ ಡೀ ಹೈಡ್ರೇಟ್ ಆಗುವುದು ತಪ್ಪಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಮೇಲೆ ಹೆಚ್ಚು ನಿಗಾ ವಹಿಸಬೇಕು ಎಂದು ಸೂಚಿಸಲಾಗಿದೆ.