SHIVAMOGGA LIVE NEWS | 26 APRIL 2023
SHIMOGA : ಚುನಾವಣಾಧಿಕಾರಿ ಅನುಮತಿ ಪಡೆಯದೆ ಪಕ್ಷವೊಂದರ ಕರಪತ್ರ ಮುದ್ರಣ ಮಾಡುತ್ತಿದ್ದ ಖಚಿತ ಮಾಹಿತಿ ಹಿನ್ನೆಲೆ ಪೊಲೀಸರೊಂದಿಗೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಸ್ಟರ್ ಪ್ರಿಂಟ್ ಮತ್ತು ಮುದ್ರಿತ ಕೆಲವು ಕರಪತ್ರಗಳನ್ನು (Pamphlet) ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗದ ಕೆ.ಆರ್.ಪುರಂನಲ್ಲಿರುವ ಪ್ರಿಂಟಿಂಗ್ ಪ್ರೆಸ್ ಮೇಲೆ ದಾಳಿ ನಡೆಸಲಾಗಿದೆ. ಪ್ರಿಂಟಿಂಗ್ ಪ್ರೆಸ್ನಲ್ಲಿ ಭದ್ರಾವತಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಅವರ ಕರಪತ್ರ ಮುದ್ರಣವಾಗಿತ್ತು. ಆದರೆ ಕರಪತ್ರ ಮುದ್ರಣಕ್ಕೆ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆ ದಾಳಿ ನಡೆಸಿ ಎರಡು ಮಾಸ್ಟರ್ ಪ್ರಿಂಟ್, ಒಂದು ಸಿಡಿ, ಕನ್ನಡ ಮತ್ತು ಉರ್ದು ಭಾಷೆಯಲ್ಲಿದ್ದ ಕರಪತ್ರಗಳನ್ನು (Pamphlet) ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ – ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, 13 ವಿದ್ಯಾರ್ಥಿಗಳು ಆಸ್ಪತ್ರೆಗೆ
ಘಟನೆ ಸಂಬಂಧ ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕ ಅಬ್ದುಲ್ ಸಲಾಂ ಎಂಬುವವರ ವಿರುದ್ಧ ಚುನಾವಣಾಧಿಕಾರಿ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.