ಶಿವಮೊಗ್ಗದ ಲೈವ್.ಕಾಂ | BHADRAVATHI NEWS | 15 ಜನವರಿ 2022
ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಭದ್ರಾವತಿ ತಾಲೂಕಿನ ತಾರೀಕಟ್ಟೆಯಲ್ಲಿ ಅಯ್ಯಪ್ಪ ಸ್ವಾಮಿ ಇರುಮುಡಿ ಕಟ್ಟುವಾಗ ಗ್ರಾಮಸ್ಥರು ಮತ್ತು ಭಕ್ತರ ಕುಟುಂಬಗಳಿಗೆ ಏರ್ಪಡಿಸುವ ಊಟಕ್ಕೆ ಬಂದವರು ಮತ್ತು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಜಮೀನುದಾರರ ನಡುವೆ ಕ್ಷುಲ್ಲಕ ಕಾರಣಕ್ಕೆ ಗುರುವಾರ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಮೂವರು ಆಸ್ಪತ್ರೆ ಸೇರಿದರೆ, ಹಲ್ಲೆ ಮಾಡಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸ್ವಲ್ಪ ಹೊತ್ತು ಉಳುಮೆ ನಿಲ್ಲಿಸುವಂತೆ ಮನವಿ
ಗ್ರಾಮದ ಸರಕಾರಿ ಶಾಲೆ ಪಕ್ಕದಲ್ಲಿ ಶಬರಿಮಲೈಗೆ ಹೋಗುವ ಭಕ್ತರ ಇರುಮುಡಿ ಕಟ್ಟುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮಸ್ಥರಿಗೆ ಮತ್ತು ಇರುಮುಡಿ ಕಟ್ಟಿಕೊಂಡು ಹೋಗುವ ಭಕ್ತರ ಕುಟುಂಬಗಳಿಗೆ ಸಂಪ್ರದಾಯದಂತೆ ಶಾಲೆ ಪಕ್ಕದಲ್ಲಿ ಊಟಕ್ಕೆ ಏರ್ಪಾಡು ಮಾಡಲಾಗಿತ್ತು. ಆದರೆ ಅಲ್ಲೇ ಪಕ್ಕದ ಜಮೀನಿನಲ್ಲಿ ಷಡಾಕ್ಷರಯ್ಯ ಎಂಬುವರು ಉಳುಮೆ ಮಾಡುತ್ತಿದ್ದು, ಇದರಿಂದ ವಿಪರೀತ ಧೂಳೇಳುತ್ತಿತ್ತು.
ಆಗ ಗ್ರಾಮಸ್ಥರು ಸ್ವಲ್ಪ ಹೊತ್ತು ಉಳುಮೆ ನಿಲ್ಲಿಸುವಂತೆ ಕೋರಿಕೊಂಡರು. ಆದರೆ, ಷಡಾಕ್ಷರಯ್ಯ ಟ್ರ್ಯಾಕ್ಟರ್ ನಿಲ್ಲಿಸದಿರುವುದರಿಂದ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿದ್ದು, ಮಾರಾಮಾರಿ ನಡೆದಿದೆ.
ಮೂವರು ಆಸ್ಪತ್ರೆಗೆ ದಾಖಲು
ಗ್ರಾಮದ ಸುಬ್ರಮಣ್ಯ ನಾಯ್ಡು, ಮರಿಸ್ವಾಮಿ ಹಾಗು ಲಕ್ಷ್ಮಿರೆಡ್ಡಿ ಎಂಬುವವರಿಗೆ ಷಡಾಕ್ಷರಯ್ಯ ಮತ್ತು ಮಕ್ಕಳಾದ ವಾಗೀಶ್ ಮತ್ತು ಲೋಕೇಶ್ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಗಾಯಗೊಂಡ ಸುಬ್ರಮಣಿ ನಾಯ್ಡು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ, ಇನ್ನಿಬ್ಬರನ್ನು ಹಳೇನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.