ಶಿವಮೊಗ್ಗ ಲೈವ್.ಕಾಂ | SAGARA NEWS | 21 ಅಕ್ಟೋಬರ್ 2021
ಈದ್ ಮಿಲಾದ್ ಸಂದರ್ಭ ಮುಸ್ಲಿಂ ಯುವಕರ ಅನುಚಿತ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಗರ ತಾಲೂಕು ಇಕ್ಕೇರಿ ಅಘೋರೇಶ್ವರ ದೇವಸ್ಥಾನದ ಮುಂದೆ, ಎರಡು ಆಟೋದಲ್ಲಿ ಬಂದ ಯುವಕರ ಗುಂಪು, ಭಕ್ತರಿಗೆ ಅಡ್ಡಿಪಡಿಸಿದ್ದಾರೆ. ಆಟೋಗಳ ಮೇಲೆ ಧ್ವಜಗಳನ್ನು ಕಟ್ಟಿಕೊಂಡು, ಘೋಷಣೆಗಳನ್ನು ಕೂಗುತ್ತ ಅಡ್ಡಾದಿಡ್ಡಿ ಚಲಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೇವಸ್ಥಾನದ ಪಕ್ಕದ ಖಾಲಿ ಜಾಗದಲ್ಲಿ ಆಟೋಗಳನ್ನು ಅಜಾಗರೂಕವಾಗಿ ಚಲಾಯಿಸಿದ್ದಾರೆ. ಈ ಸಂಬಂಧ ಎರಡು ಆಟೋಗಳು ಮತ್ತು ಅದರ ಚಾಲಕರ ವಿರುದ್ಧ ದೂರು ನೀಡಲಾಗಿದೆ. ಅರ್ಜನ್, ಅರ್ಫತ್, ಅಬ್ದುಲ್ ತೌಫಿಕ್, ಅಕ್ಮಲ್ ಖಾನ್ ಎಂಬುವವರ ವಿರುದ್ಧ ದೂರು ನೀಡಲಾಗಿದೆ.
ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ನಡೆದುಕೊಳ್ಳಲಾಗಿದೆ. ಆದ್ದರಿಂದ ಈ ಯುವಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಭಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಶಿವಾಜಿ, ಗ್ರಾಮಸ್ಥರಾದ ಮಾ.ಪು.ಇಕ್ಕೇರಿ, ಅಮರನಾಥ್, ರಾಘವೇಂದ್ರ ಹುಲಿಮನೆ, ಪ್ರದೀಪ್ ಹಳೆ ಇಕ್ಕೇರಿ, ನಾಗರಾಜ್ ಕಲ್ಮನೆ, ಹರೀಶ್ ಇಕ್ಕೇರಿ, ಗಣೇಶ್ ಸೇರಿದಂತೆ ಹಲವರು ದೂರು ನೀಡಿದ್ದಾರೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.