ಶಿವಮೊಗ್ಗ ಲೈವ್.ಕಾಂ | SHIMOGA | 27 ಮಾರ್ಚ್ 2020
ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಬಂದಿರುವ 51 ಮಂದಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳೆಯರು, ಮಕ್ಕಳು ಕೂಡ ಈ ತಂಡದಲ್ಲಿದ್ದು, ಪರೀಕ್ಷೆಗೆ ಒಳಪಡಿಸಿ,ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.
ಯಾರು ಇವರೆಲ್ಲ? ಶಿವಮೊಗ್ಗಕ್ಕೇಕೆ ಬಂದಿದ್ದಾರೆ?
ಇವರೆಲ್ಲ ಮಹಾರಾಷ್ಟ್ರದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕರೋನ ಸೋಂಕು ಪರಿಣಾಮ ಸ್ಥಳೀಯರು ಒತ್ತಡಕ್ಕೆ ಮಣಿದು ಇವರು ಕೆಲಸ ಮಾಡುತ್ತಿದ್ದ ಕಂಪೆನಿ, ಇವರನ್ನೆಲ್ಲ ಕೆಲಸದಿಂದ ತೆಗೆದು ಹಾಕಿದೆ. ಹಾಗಾಗಿ ಇವರೆಲ್ಲ ತಮ್ಮೂರಿಗೆ ಹಿಂತಿರುಗಿದ್ದಾರೆ. ಈ ತಂಡದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಚಿಕ್ಕಮಗಳೂರಿಗೆ ಸೇರಿದವರೆ ಹೆಚ್ಚಿದ್ದಾರೆ. ಇವರು ಮಹಾರಾಷ್ಟ್ರದಿಂದ ಖಾಸಗಿ ಬಸ್’ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಊಟವಿಲ್ಲ, ನೀರಿಲ್ಲ, ನೆಮ್ಮದಿಯು ಇಲ್ಲ
ಮಹಾರಾಷ್ಟ್ರದಿಂದ ಖಾಲಿ ಕೈಯಲ್ಲಿ ಹೊರಟಿರುವ ಇವರಿಗೆ ದಾರಿಯುದ್ದಕ್ಕೂ ಸಮಸ್ಯೆ ಉಂಟಾಗಿದೆ. ಎಲ್ಲೆಲ್ಲೂ ಊಟ ಸಿಗದೆ ಪರಿತಪಿಸಿದ್ದಾರೆ. ಪ್ರತಿ ಚೆಕ್’ಪೋಸ್ಟ್’ನಲ್ಲಿಯು ಇವರನ್ನು ತಡೆದು, ಮಾಹಿತಿ ಕೇಳಿ ಕಳುಹಿಸಲಾಗಿದೆ.
ಸೀದಾ ಮೆಗ್ಗಾನ್ ಆಸ್ಪತ್ರೆಗೆ ದಾಖಲು
51 ಜನರು ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಪೊಲೀಸರು ಮತ್ತು ಅಧಿಕಾರಿಗಳು ಇವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರತಿಯೊಬ್ಬರನ್ನು ಸೋಷಿಯಲ್ ಡಿಸ್ಟೆನ್ಸ್’ನಲ್ಲಿ ಕ್ಯೂ ನಿಲ್ಲಿಸಿ, ಸ್ಕ್ರೀನಿಂಗ್ ಮಾಡಲಾಗಿದೆ.
ದೇಶದಲ್ಲಿ ಕೇರಳ ಹೊರತು ಮಹಾರಾಷ್ಟ್ರ ರಾಜ್ಯ ಅತಿ ಹೆಚ್ಚು ಕರೋನ ಪ್ರಕರಣಗಳನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ 130 ಕರೋನ ಕೇಸ್’ಗಳಿವೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. 15 ಮಂದಿ ಗುಣವಾಗಿದ್ದಾರೆ. ಇದೇ ಕಾರಣಕ್ಕೆ ಮಹಾರಾಷ್ಟ್ರದಿಂದ ಬಂದಿರುವ 51 ಮಂದಿಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]