SHIVAMOGGA LIVE NEWS | 6 JANUARY 2024
BANGALORE : ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವರ್ಗಾವಣೆಯನ್ನು ಮರು ಪರಿಶೀಲಿಸುವಂತೆ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್ಎಟಿ) ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ನಾಲ್ಕು ವಾರದೊಳಗೆ ಮರು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದೆ.
ವರ್ಗಾವಣೆ ಆದೇಶದ ವಿರುದ್ಧ ಅರ್ಜಿ
ಲೆಕ್ಕಪತ್ರ ಅಧೀಕ್ಷಕ ವೃಂದದ ಸಿ.ಎಸ್.ಷಡಾಕ್ಷರಿ ಅವರನ್ನು ಶಿವಮೊಗ್ಗದ ಸ್ಥಳೀಯ ಲೆಕ್ಕಪರಿಶೋಧನೆ ವೃತ್ತದ ಜಂಟಿ ನಿರ್ದೇಶಕರ ಸ್ಥಾನದಿಂದ ಕೋಲಾರದಲ್ಲಿ ಖಾಲಿ ಇದ್ದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯ ಲೆಕ್ಕಪತ್ರ ಅಧೀಕ್ಷಕ ಹುದ್ದೆಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ 2023ರ ನವೆಂಬರ್ 8ರಂದು ಸರ್ಕಾರ ಆದೇಶ ಹೊರಡಿಸಿತ್ತು. ವರ್ಗಾವಣೆ ಆದೇಶ ರದ್ದುಪಡಿಸಬೇಕು ಎಂದು ಸಿ.ಎಸ್.ಷಡಾಕ್ಷರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಸ್ಎಟಿಯ ನ್ಯಾಯಾಂಗ ಸದಸ್ಯ ಟಿ.ನಾರಾಯಣಸ್ವಾಮಿ ಈ ಆದೇಶ ನೀಡಿದ್ದಾರೆ.
ದುರುದ್ದೇಶ, ರಾಜಕೀಯ ಪ್ರೇರಿತ ವರ್ಗ
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೊಬ್ಬರ ದೂರಿನ ಆಧಾರದಲ್ಲಿ ವರ್ಗಾವಣೆ ಮಾಡಲಾಗಿದೆ. ಇದು ದುರುದ್ದೇಶ ಮತ್ತು ರಾಜಕೀಯ ಪ್ರೇರಿತ ದೂರು. ಅದನ್ನು ಪರಿಗಣಿಸಿ ವರ್ಗಾವಣೆ ಮಾಡಿರುವುದು ಕಾನೂನು ಬಾಹಿರ ಎಂದು ಸಿ.ಎಸ್.ಷಡಾಕ್ಷರಿ ಕಎಸ್ಎಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ ಸರ್ಕಾರ 2013ರಲ್ಲಿ ಹೊರಡಿಸಿರುವ ಆದೇಶ (ವರ್ಗಾವಣೆ ಮಾರ್ಗಸೂಚಿ) ಅನುಗಣವಾಗಿ ವರ್ಗಾವಣೆಯಾಗಿಲ್ಲ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಲೆನಾಡು ಮಿತ್ರ ಪತ್ರಿಕೆ ಮರು ಲೋಕಾರ್ಪಣೆ, ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?