ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 JANUARY 2024
SHIMOGA : ಬೆಳಗಿನ ಜಾವ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅಡ್ಡಗಟ್ಟಿ ನಗದು, ಮೊಬೈಲ್ ರಾಬರಿ ಮಾಡಲಾಗಿದೆ. ಶಿವಮೊಗ್ಗದ ಲಗಾನ್ ಕಲ್ಯಾಣ ಮಂದಿರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯೊಂದರ ಮ್ಯಾನೇಜರ್ ಆಗಿರುವ ಮುರುಳೀಧರ್ ಎಂಬುವವರನ್ನು ಅಡ್ಡಗಟ್ಟಿ, ಚೂಪಾದ ವಸ್ತುವಿನಿಂದ ಹಲ್ಲೆಗೆ ಯತ್ನಿಸಲಾಗಿದೆ.
ಘಟನೆ ಸಂಭವಿಸಿದ್ದು ಹೇಗೆ?
ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದಿದ್ದ ಮುರಳೀಧರ್ ಅವರು ಬೆಳಗ್ಗೆ 4 ಗಂಟೆಗೆ ಆಟೋದಲ್ಲಿ ಗಾಡಿಕೊಪ್ಪದವರೆಗೆ ಬಂದಿದ್ದರು. ಅಲ್ಲಿ ಆಟೋ ಇಳಿದು ಲಗಾನ್ ಕಲ್ಯಾಣ ಮಂದಿರ ರಸ್ತೆಯ ಮೂಲಕ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ತಮ್ಮ ಮನೆವರೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಶಿಕಾರಿಪುರಕ್ಕೆ ಹೇಗೆ ಹೋಗುವುದು ಎಂದು ವಿಚಾರಿಸಿ ತೆರಳಿದ್ದರು. ಒಂದೆರಡು ನಿಮಿಷದ ಬಳಿಕ ಅದೇ ಬೈಕ್ ಮುರಳೀಧರ್ ಅವರ ಬಳಿ ಬಂದಿತ್ತು.
ಇದನ್ನೂ ಓದಿ – ಚೀಲೂರಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ KSRTC ಬಸ್
ಬೈಕ್ನ ಹಿಂಬದಿಯತ ಸವಾರ ವಸ್ತುವೊಂದರಿಂದ ಮುರಳೀಧರ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಕೂಡಲೆ ಕೈ ಅಡ್ಡ ಹಿಡಿದಿದ್ದರಿಂದ ಮುರಳೀಧರ್ ಅವರ ಕೈಗೆ ಗಾಯವಾಗಿದೆ. ಈ ಸಂದರ್ಭ ಅವರ ಬಳಿ ಇದ್ದ ಬ್ಯಾಗ್ ಮತ್ತು ಪರ್ಸ್ ಕಸಿದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದರು. ಕೂಡಲೆ ತಮ್ಮ ಸಂಬಂಧಿಗೆ ಕರೆ ಮಾಡಿದ ಮುರಳೀಧರ್ ನಂಜಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಅವರ ಬ್ಯಾಗ್ ಮತ್ತು ಪರ್ಸ್ ಸಿಕ್ಕಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಅದರಲ್ಲಿದ್ದ 35 ಸಾವಿರ ರೂ. ನಗದು, ಮೊಬೈಲ್ ಫೋನ್ ಮತ್ತು ಏರ್ ಪಾಡ್ಗಳು ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಲೈವ್.ಕಾಂ