ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯ ತಿರುಮಲ ಲಾಡ್ಜ್ನಲ್ಲಿ (Lodge) ವ್ಯಕ್ತಿಯೊಬ್ಬ ಅತಿರೇಕವಾಗಿ ವರ್ತಿಸಿ, ಲಾಡ್ಜ್ನ ಬಾಗಿಲು ಮುರಿದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಲಾಡ್ಜ್ನ ರೂಂ ನಂಬರ್ 405ರಲ್ಲಿ ತಂಗಿದ್ದ ಬೆಂಗಳೂರಿನ ಸ್ಯಾಮ್ಸನ್ ಪಿಂಟೋ ಎಂಬಾತ ಮಧ್ಯಾಹ್ನದ ಸಮಯದಲ್ಲಿ ಜೋರಾಗಿ ಕೂಗಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಉಳಿದ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂದು ಲಾಡ್ಜ್ ಸಿಬ್ಬಂದಿ ಸಂತೋಷ್ ಎಂಬುವವರು ತಿಳಿಹೇಳಿದ್ದರು. ಇದರಿಂದ ಕೆರಳಿದ ಆರೋಪಿಯು ಸಿಬ್ಬಂದಿಗಳು ಊಟ ಮಾಡುತ್ತಿದ್ದ ಕೊಠಡಿಯ ಬಾಗಿಲನ್ನು ಕಾಲಿನಿಂದ ಒದ್ದು ಮುರಿದು ಒಳನುಗ್ಗಿದ್ದಾನೆ ಎಂದು ಆರೋಪಿಸಲಾಗಿದೆ.

ಅಲ್ಯೂಮಿನಿಯಂ ಪಟ್ಟಿಯಿಂದ ಸಿಬ್ಬಂದಿ ರವಿ ಮತ್ತು ಸಚಿನ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಹೋದ ಮತ್ತೊಬ್ಬ ಮಹಿಳಾ ಸಿಬ್ಬಂದಿಯ ಬಟ್ಟೆ ಹಿಡಿದು ಎಳೆದಾಡಿ ತಳ್ಳಿದ್ದಾನೆ. ಅವರ ಎಡಗೈ ಮತ್ತು ತಲೆಗೆ ಗಾಯಗಳಾಗಿವೆ. ಅಷ್ಟೇ ಅಲ್ಲದೆ, ಗಲಾಟೆ ಬಿಡಿಸಲು ಬಂದ ರವಿ ಎಂಬುವವರ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಸಾಗರ ಮಾರಿಕಾಂಬ ಜಾತ್ರೆ, ಮಧ್ಯಾಹ್ನದಿಂದ ಯಾರಿಗೂ ದೇವಿ ದರ್ಶನವಿಲ್ಲ, ಕಾರಣವೇನು?







