ಬೊಲೇರೋ ಜೀಪಲ್ಲಿ ಬಂದು ಒಂಟಿ ಮನೆಯಲ್ಲಿ ದರೋಡೆಗೆ ಯತ್ನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | THIRTHAHALLI | 20 ಏಪ್ರಿಲ್ 2022

ಸೋಲಾರ್ ರಿಪೇರಿ ನೆಪದಲ್ಲಿ ಮನೆ ಬಳಿಗೆ ಬಂದವರು ದರೋಡೆ ವಿಫಲ ಯತ್ನ ನಡೆಸಿದ್ದಾರೆ. ಮಹಿಳೆಯರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ದರೋಡೆ ತಪ್ಪಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ.

ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿ ಸೋಮವಾರ ಸಂಜೆ ಘಟನೆ ಸಂಭವಿಸಿದೆ.

ಏನಿದು ಪ್ರಕರಣ?

ನೆರಟೂರು ಗ್ರಾಪಂ ವ್ಯಾಪ್ತಿಯ ಹೊರಣಿ ಗ್ರಾಮದಲ್ಲಿ ಸೋಮವಾರ ಸಂಜೆ ಸೋಲಾರ್‌ ರಿಪೇರಿ ಮಾಡುವ ನೆಪದಲ್ಲಿ ಶ್ರೀನಾಥ್ ಎಂಬುವವರ ಒಂಟಿ ಮನೆಗೆ ನುಗ್ಗಿದ ದರೋಡೆಕೋರರಿಗೆ ಮನೆಯಲ್ಲಿದ್ದ ಕುಟುಂಬದವರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಪರಾರಿಯಾಗಿದ್ದಾರೆ.

ಬೊಲೆರೋ ವಾಹನದಲ್ಲಿ ಬಂದ ಆರು ದರೋಡೆಕೋರರು ಸೋಲಾರ್ ರಿಪೇರಿ ಮಾಡುವುದಾಗಿ ಪರಿಚಯಿಸಿಕೊಂಡಿದ್ದಾರೆ. ಎದುರಿಗೆ ಬಂದ ಶ್ರೀನಾಥ್ ಅವರ ಪತ್ನಿ ಪದ್ಮಾವತಮ್ಮ ಮತ್ತು ಇವರ ಮಗಳ ಮುಖಕ್ಕೆ ದರೋಡೆಕೋರರು ಕ್ಲೋರೋಫಾರ್ಮ್ ಸಿಂಪಡಿಸಿದ ಬಟ್ಟೆಯನ್ನು ಮುಖಕ್ಕೆ ಒತ್ತಿಹಿಡಿದಿದ್ದಾರೆ.

ಭಯದಿಂದ ಕೆಳಗೆ ಬಿದ್ದ ಪದ್ಮಾವತಮ್ಮ ಅವರ ನಾಲ್ಕು ಹಲ್ಲುಗಳು ಮುರಿದಿವೆ. ಆಗ ಮನೆಯಲ್ಲಿ ಐದು ಮಂದಿ ಸದಸ್ಯರು ಜೋರಾಗಿ ಕೂಗಿ ಪ್ರತಿರೋಧ ತೋರಿದ್ದಾರೆ. ಆಗ ಅಕ್ಕಪಕ್ಕದವರೆಲ್ಲರೂ ಬರುತ್ತಿದ್ದಂತೆ ದರೋಡೆಕೋರು ಪರಾರಿಯಾಗಿದ್ದಾರೆ.

ನಂಬರ್ ಪ್ಲೇಟ್’ಗೆ ಸೆಗಣಿ ಮೆತ್ತಿದ್ದರು

ಸಿನಿಮೀಯ ಮಾದರಿಯಲ್ಲಿ ನಡೆದ ಈ ಪ್ರಕರಣದಲ್ಲಿ ಮನೆಯಲ್ಲಿದ್ದವರ ಸಕಾಲಿಕ ಸಮಯಪ್ರಜ್ಞೆ ಮತ್ತು ತೋರಿದ ಧೈರ್ಯದಿಂದಾಗಿ ಯಾವುದೇ ವಸ್ತುಗಳು ಅಪಹರಣವಾಗಿಲ್ಲ. ದರೋಡೆಕೋರರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿದ್ದು, ವಾಹನದ ನಂಬರ್ ಪ್ಲೇಟಿಗೆ ಸೆಗಣಿ ಮೆತ್ತಿದ್ದರು ಎನ್ನಲಾಗಿದೆ.

ಸಚಿವರು, ಮಾಜಿ ಸಚಿವರು ಭೇಟಿ

ವಿಚಾರ ತಿಳಿಯುತ್ತಿದ್ದ ಹಾಗೆ ಗೃಹ ಸಚಿವರು ಮತ್ತು ಮಾಜಿ ಸಚಿವರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಮನೆಗೆ ಭೇಟಿ ನೀಡಿ, ಈ ಭಾಗದಲ್ಲಿ ನಡೆದಿರುವ ಅತ್ಯಂತ ಆತಂಕದ ಘಟನೆಯಾಗಿದೆ. ದರೋಡೆಕೋರರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯವಾಗಿ ಮನೆಯವರು ದರೋಡೆಕೋರರನ್ನು ಧೈರ್ಯದಿಂದ ಎದುರಿಸಿದ ಪರಿಣಾಮ ಹಾನಿಗೆ ಅವಕಾಶವಾಗಿಲ್ಲ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದರು.

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 20, 2022

Leave a Comment