ಶಿವಮೊಗ್ಗ: ನಗರದ ಸಾಗರ ರಸ್ತೆಯ APMC ಬಳಿ ನಡೆದ ರಸ್ತೆ ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡಿದ್ದ ಭದ್ರಾವತಿ (Bhadravathi) ಮೂಲದ ಯುವಕ ಸೃಜನ್ (19) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಶನಿವಾರ ಬೆಳಗಿನ ಜಾವ ಈ ದುರ್ಘಟನೆ ಸಂಭವಿಸಿದೆ.
ಮೃತ ಸೃಜನ್ ಭದ್ರಾವತಿಯ ಹಳೇನಗರದ ನಿವಾಸಿಯಾಗಿದ್ದು, ಡೆಕೋರೇಶನ್ ಕೆಲಸ ಮಾಡಿಕೊಂಡಿದ್ದನು. ಶುಕ್ರವಾರ ಕೆಲಸದ ನಿಮಿತ್ತ ತನ್ನ ಗೆಳೆಯ ಸಂಜಯ್ ಎಂಬುವವರ ಕಾರಿನಲ್ಲಿ ಸಾಗರಕ್ಕೆ ಹೋಗಿದ್ದ ಸೃಜನ್, ಕೆಲಸ ಮುಗಿಸಿ ವಾಪಸ್ ಊರಿಗೆ ಮರಳುತ್ತಿದ್ದರು. ಈ ಸಂದರ್ಭ ಅಪಘಾತ ಸಂಭವಿಸಿದೆ. ಕಾರನ್ನು ಸಂಜಯ್ ಚಾಲನೆ ಮಾಡುತ್ತಿದ್ದು, ಪಕ್ಕದ ಸೀಟಿನಲ್ಲಿ ಸೃಜನ್ ಕುಳಿತಿದ್ದನು.

ಇದನ್ನೂ ಓದಿ : ಜಮೀನಿನಲ್ಲಿ ಕೆಲಸ ಮುಗಿಸಿ ರಸ್ತೆ ಬದಿಗೆ ಬಂದ ಹಾರನಹಳ್ಳಿಯ ರೈತನಿಗೆ ಕಾದಿತ್ತು ಆಘಾತ
ಶನಿವಾರ ನಡುರಾತ್ರಿ 1:30ರ ಹೊತ್ತಿಗೆ ಕಾರು ಸಾಗರ ರಸ್ತೆಯ ಆರ್ಎಂಸಿ ಸಮೀಪದ ಬರುತ್ತಿದ್ದಾಗ ನಾಯಿ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಯಾವುದೇ ಪಾರ್ಕಿಂಗ್ ಲೈಟ್ ಹಾಕದೆ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಲಾರಿಯನ್ನು ನಿಲ್ಲಿಸಿದ್ದೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಪಘಾತದಿಂದಾಗಿ ತಲೆ ಹಾಗೂ ಎದೆಗೆ ತೀವ್ರ ಪೆಟ್ಟು ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಸೃಜನ್ನನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೃಜನ್ ಸಾವನ್ನಪ್ಪಿದ್ದಾನೆ. ಈ ಸಂಬಂಧ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕ ಸಂಜಯ್ ಹಾಗೂ ಲಾರಿ ಚಾಲಕ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದೆ.
