ಜಮೀನು ವಿವಾದ ಸಂಬಂಧ ಭದ್ರಾವತಿ ತಾಲೂಕು ತಿಮ್ಲಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಚನ್ನಗಿರಿ ತಾಲೂಕು ಚಿಕ್ಕೊಲಿಕೆರೆಯ ಶಿವಲಿಂಗಪ್ಪ (45) ಮೃತರು. ಗಂಭೀರ ಗಾಯಗೊಂಡಿದ್ದ ಶಿವಲಿಂಗಪ್ಪ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಏನಿದು ಘಟನೆ? ಯಾಕಾಯ್ತು ಹಲ್ಲೆ?
ಶಿವಲಿಂಗಪ್ಪ ಮತ್ತು ಸೋಮಶೇಖರ್ ಕುಟುಂಬದ ನಡುವೆ ತಿಮ್ಲಾಪುರ ಗ್ರಾಮದ ಸರ್ವೇ ನಂ.41ರ ಒಂದು ಎಕರೆ ಜಮೀನು ಸಂಬಂಧ ವ್ಯಾಜ್ಯವಿತ್ತು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳಬೇಕಿದ್ದರಿಂದ ಜಮೀನು ಪಾಳು ಬಿದ್ದಿತ್ತು.
ಶಿವಲಿಂಗಪ್ಪ ಕುಟುಂಬದವರು ಸೋಮಶೇಖರ್ ಕುಟುಂಬದವರಿಗೆ ಕೆಲವು ವರ್ಷದ ಹಿಂದೆ ಜಮೀನು ಮಾರಾಟ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಸೋಮಶೇಖರ್ ಅವರ ಕುಟುಂಬಕ್ಕೆ ಖಾತೆಯಾಗಿರಲಿಲ್ಲ ಎಂದು ತಿಳಿದು ಬಂದಿದೆ. ಇದೆ ವಿವಾದ ಕೋರ್ಟ್ನಲ್ಲಿತ್ತು.
ಶನಿವಾರ ಸೋಮಶೇಖರ್ ಅವರ ಕುಟುಂಬದವರು ಒಂದು ಎಕರೆ ಜಮೀನಿನಲ್ಲಿ ಅಡಕೆ ಸಸಿ ನೆಡಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ವಿಚಾರ ತಿಳಿದು ಶಿವಲಿಂಗಪ್ಪ ಅವರು ಜಮೀನಿನ ಬಳಿಗೆ ತೆರಳಿದ್ದಾರೆ. ಅಡಕೆ ಸಸಿ ನೆಡದಂತೆ ಸೂಚಿಸಿದ್ದಾರೆ. ಈ ವೇಳೆ ಗಲಾಟೆಯಾಗಿದೆ.
ಸೋಮಶೇಖರ್ ಕುಟುಂಬದವರು ಹೊಳಲೂರು ಭಾಗದಿಂದ ಆಟೋ ಮತ್ತು ಬೈಕ್ಗಳಲ್ಲಿ ಜನರನ್ನು ಕರೆಸಿದ್ದಾಗಿ ಹೇಳಲಾಗುತ್ತಿದೆ. ಗಲಾಟೆಯಾದಾಗ ಕೆಲವರು ಶಿವಲಿಂಗಪ್ಪ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಘಟನೆ ಸಂಬಂಧ ಮೂವರು ಮಹಿಳೆಯರು ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದು ಆಟೋ, 2 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200