ಶಿವಮೊಗ್ಗ: ಮಂಗಳಮುಖಿಯ ದರೋಡೆ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಒಂದು ಆಟೋ ಸೇರಿ ₹3.20 ಲಕ್ಷ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆದರಿಕೆ ಒಡ್ಡಿ ಮಂಗಳಮುಖಿಯ ದರೋಡೆ
ಏಪ್ರಿಲ್ 24ರ ರಾತ್ರಿ ಮಂಗಳಮುಖಿಯೊಬ್ಬರನ್ನು ಅಪರಿಚಿತರು ಆಟೋದಲ್ಲಿ ಕರೆತಂದಿದ್ದರು. ಬೊಮ್ಮನಕಟ್ಟೆ ಚಾನಲ್ ಏರಿಯಾ ಬಳಿ ಮಂಗಳಮುಖಿಯನ್ನು ಬೆದರಿಸಿ ₹4,000 ನಗದು, ಮೊಬೈಲ್, ಬಂಗಾರದ ಚೈನ್ ಮತ್ತು ಉಂಗುರಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಏಪ್ರಿಲ್ 25ರಂದು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

12 ಗಂಟೆಯೊಳಗೆ ಆರೋಪಿ ಅರೆಸ್ಟ್
ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಮತ್ತು ಎಎಸ್ಪಿ ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸಂಜೀವ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ಸುರೇಶ್ ಅವರ ಉಸ್ತುವಾರಿಯಲ್ಲಿ ಪಿಎಸ್ಐ ತಿರುಮಲೇಶ್ ಜಿ ಮತ್ತು ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಹಳೆ ಮಂಡ್ಲಿಯ ನಿವಾಸಿ ದೇವರಾಜ (27) ಎಂಬಾತನನ್ನು ಬಂಧಿಸಿದೆ.
ಇದನ್ನೂ ಓದಿ : ಶಿವಮೊಗ್ಗದ ರೈಲಿನಲ್ಲಿ ಚಾಕು ತೋರಿಸಿ ಮೊಬೈಲ್ ದರೋಡೆ ಕೇಸ್, ಇಬ್ಬರು ಆರೆಸ್ಟ್, ಏನಿದು ಪ್ರಕರಣ?
ಆಟೋ, ಮೊಬೈಲ್ ವಶಕ್ಕೆ
ಬಂಧಿತ ದೇವರಾಜ್ನಿಂದ ಕೃತ್ಯಕ್ಕೆ ಬಳಸಿದ ₹3 ಲಕ್ಷ ಮೌಲ್ಯದ ಆಟೋ, ₹20,000 ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲ ಸಿಬ್ಬಂದಿ ರಾಜು.ಕೆ.ಆರ್, ಚಂದ್ರಾನಾಯ್ಕ.ಬಿ, ವಿಜಯಕುಮಾರ್, ಮನುಶಂಕರ ಪಾಲ್ಗೊಂಡಿದ್ದರು.
ಇದನ್ನೂ ಓದಿ : ಆಗುಂಬೆ ಬಳಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಆಗಂತುಕರು, ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ದುಷ್ಕೃತ್ಯ







