ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಸವಳಂಗ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ವ್ಯಕ್ತಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ, ನಗದು ಹಾಗೂ ಬಂಗಾರದ ಬ್ರೇಸ್ಲೆಟ್ ದೋಚಿ ಪರಾರಿಯಾಗಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇಲ್ಲಿನ ಜ್ಞಾನ ಸಾಗರ ಶಾಲೆ ಬಳಿ ಆ.14ರ ರಾತ್ರಿ ಘಟನೆ ನಡೆದಿದೆ. ಸುಭಾಷ್ ಎಂಬುವವರು ಕೆಲಸದ ನಿಮಿತ್ತ ಸವಳಂಗಕ್ಕೆ ತೆರಳಿದ್ದ ಸುಭಾಷ್, ಕಾರಿನಲ್ಲಿ ಶಿವಮೊಗ್ಗಕ್ಕೆ ವಾಪಸ್ ಬರುತ್ತಿದ್ದರು. ಮೂತ್ರ ವಿಸರ್ಜನೆಗಾಗಿ ರಸ್ತೆ ಬದಿ ಕಾರನ್ನು ನಿಲ್ಲಿಸಿದ್ದರು. ಆ ಸಂದರ್ಭ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸುಭಾಷ್ ಅವರಿಗೆ ಚಾಕು ತೋರಿಸಿ, ಚುಚ್ಚುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದಾರೆ. ಬಳಿಕ ₹2000 ನಗದು ಹಾಗೂ ₹90,000 ಮೌಲ್ಯದ 6 ಗ್ರಾಂ ತೂಕದ ಬಂಗಾರದ ಬ್ರೇಸ್ಲೆಟ್ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.