HOSANAGARA : ಅಬ್ಬಿ ಜಲಪಾತದ (Falls) ನೀರಿನಲ್ಲಿ ಕೊಚ್ಚಿಹೋಗಿದ್ದ ಬಳ್ಳಾರಿಯ ವಿನೋದ್ ಅವರ ಶವ ಪತ್ತೆಯಾಗಿದೆ. ಹೊಸನಗರ ತಾಲ್ಲೂಕಿನ ಯಡೂರು ಬಳಿ ಅಬ್ಬಿ ಜಲಪಾತದಲ್ಲಿ ಭಾನುವಾರ ಈ ದುರ್ಘಟನೆ ಸಂಭವಿಸಿತ್ತು. ಮಧ್ಯಾಹ್ನದಿಂದಲೇ ಪಿಎಸ್ಐ ರಮೇಶ್ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ತೀವ್ರ ಶೋಧ ನಡೆಸಿದ್ದರು. ಆದರೂ ವಿನೋದ್ ಮೃತದೇಹ ಪತ್ತೆಯಾಗಿರಲಿಲ್ಲ.
ಸೋಮವಾರ ಬೆಳಿಗ್ಗೆ ಮುಳುಗು ತಜ್ಞರಾದ ಈಶ್ವರ ಮಲ್ಪೆ ಮತ್ತು ತಂಡ, ಕೋಟ ಜೀವನ್ ಮಿತ್ರ, ನಾಗರಾಜ ಪುತ್ರನ್ ಅವರನ್ನು ಕರೆಯಿಸಿ ಶೋಧ ಕಾರ್ಯ ನಡೆಸಿದಾಗ ನೀರಿನೊಳಗೆ ಕಲ್ಲಿನ ನಡುವೆ ಸಿಲುಕಿದ್ದ ವಿನೋದ್ ಮೃತದೇಹವನ್ನು ಹೊರಕ್ಕೆ ತೆಗೆಯಲಾಯಿತು.

ನಗರ ಸಂಯುಕ್ತ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಿನೋದ್ ಹುಟ್ಟೂರು ಬಳ್ಳಾರಿ ಜಿಲ್ಲೆಯ ಮಿಂಚೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ಸೇರಿ 12 ಮಂದಿ ಅಬ್ಬಿ ಜಲಪಾತ ವೀಕ್ಷಿಸಲು ಬಂದಿದ್ದರು.
ಇದನ್ನೂ ಓದಿ – ಮೆಗ್ಗಾನ್ ಆಸ್ಪತ್ರೆಯ ತುರ್ತು ನಿಗಾ ಘಟಕದಿಂದ ಹೊರ ಬಂದ ವ್ಯಕ್ತಿಗೆ ಕಾದಿತ್ತು ಶಾಕ್