SHIVAMOGGA LIVE NEWS | 26 FEBRUARY 2024
SHIMOGA : ಜಿಲ್ಲೆಯ ಮೂರು ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ವರ್ಚುವಲ್ ಕಾರ್ಯಕ್ರಮದಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿ 41 ಸಾವಿರ ಕೋಟಿ ರೂ. ವೆಚ್ಚದಲ್ಲಿ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು 1500 ರಸ್ತೆಯ ಮೇಲ್ಸೇತುವೆ, ಕೆಳ ಸೇತುವೆಗಳ ಶಿಲಾನ್ಯಾಸ, ಉದ್ಘಾಟನೆ ಸೇರಿದಂತೆ ವಿವಿಧ ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲೆಯ ಮೂರು ನಿಲ್ದಾಣ ಮೇಲ್ದರ್ಜೆಗೆ
ಅಮೃತ್ ಭಾರತ ನಿಲ್ದಾಣ ಯೋಜನೆ ಅಡಿ ಜಿಲ್ಲೆಯ ಮೂರು ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 24.37 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಿಲ್ದಾಣ, 26.44 ಕೋಟಿ ರೂ. ವೆಚ್ಚದಲ್ಲಿ ಸಾಗರ ರೈಲ್ವೆ ನಿಲ್ದಾಣ, 27.86 ಕೋಟಿ ರೂ. ವೆಚ್ಚದಲ್ಲಿ ತಾಳಗುಪ್ಪ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 2.17 ಕೋಟಿ ರೂ. ವೆಚ್ಚದಲ್ಲಿ ಅರಸಾಳು ರಸ್ತೆ ಮೇಲ್ಸೇತುವೆ ಕಾಮಗಾರಿ ನಡೆಯಲಿದೆ.
ಶಿವಮೊಗ್ಗ ನಿಲ್ದಾಣದಲ್ಲಿ ಏನೇನೆಲ್ಲ ಅಭಿವೃದ್ಧಿಯಾಗಲಿದೆ?
ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದು. ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಮಕ್ಕಳಿಗೆ ಹಾಲುಣಿಸಲು ಕ್ಯೂಬಿಕಲ್. ಪ್ಲಾಟ್ಫಾರಂನಲ್ಲಿ ಶೌಚಾಲಯ. ನಿಲ್ದಾಣದ ಕಟ್ಟಡದಲ್ಲಿ ಗ್ರಾನೈಟ್ ಫ್ಲೋರ್, ಉಳಿದೆಡೆ ಕಾಂಕ್ರೀಟ್ ಫ್ಲೋರ್, ಪ್ಲಾಟ್ಫಾರಂನ ಅಂಚಿನಲ್ಲಿ ವಿಶೇಷ ಟೈಲ್ಸ್ ಮತ್ತು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ.
ಪ್ಲಾಟ್ಫಾರಂನ ಉದ್ದಕ್ಕೂ ಮೇಲ್ಚಾವಣಿ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ಗೆ ಪ್ರತ್ಯೇಕ ಸ್ಥಳ ಮತ್ತು ಅವುಗಳಿಗೆ ಮೇಲ್ಛಾವಣಿ. ರೈಲ್ವೆ ನಿಲ್ದಾಣದ ಸುತ್ತಲು ಕಾಂಪೌಂಡ್ ನಿರ್ಮಾಣ. ಮಳೆ ಕೊಯ್ಲು ವ್ಯವಸ್ಥೆ.
ಪ್ರಯಾಣಿಕರು ಪ್ಲಾಟ್ಫಾರಂಗೆ ತೆರಳಲು ಅನುಕೂಲವಾಗಲೆಂದು 12 ಮೀಟರ್ ಅಗಲದ ಮೇಲ್ಸೇತುವೆ. ಈ ಮೇಲ್ಸೇತುವೆಯ ಪ್ಲಾಟ್ಫಾರಂ 1ರಲ್ಲಿ ಒಂದು ಲಿಫ್ಟ್, ಎಸ್ಕಲೇಟರ್. ಪ್ಲಾಟ್ಫಾರಂ 2 ಮತ್ತು 3ರಲ್ಲಿ 1 ಲಿಫ್ಟ್ ಮತ್ತು ರಾಂಪ್ ಅಳವಡಿಸಲಾಗುತ್ತದೆ. ಸಿಸಿಟಿವಿ, ವೈಫೈ, ರೈಲ್ವೆ ವೇಳಾಪಟ್ಟಿಯ 6 ಲೈನ್ ಡಿಜಿಟಲ್ ಡಿಸ್ಪ್ಲೆ, ಎಲ್ಇಡಿ ಡಿಸ್ಪ್ಲೆ, ಕೋಚ್ ಕುರಿತ ಮಾಹಿತಿ ಫಲಕಗಳ ಅಳವಡಿಕೆ. ರೈಲ್ವೆ ನಿಲ್ದಾನ ಕಟ್ಟಡದ ಮುಂಭಾಗದ ಅಭಿವೃದ್ಧಿಪಡಿಸಲಾಗುತ್ತದೆ.
ಇದನ್ನೂ ಓದಿ – ವಿದ್ಯಾನಗರ ವೃತ್ತಾಕಾರ ಸೇತುವೆ ಮೇಲೆ ವಾಹನ ಸಂಚಾರ ಶುರು, ಮೊದಲ ದಿನ ಹೇಗಿತ್ತು ಜನರ ಪ್ರತಿಕ್ರಿಯೆ?