ಶಿವಮೊಗ್ಗದ ಲೈವ್.ಕಾಂ | SHIMOGA NEWS | 2 ಜನವರಿ 2022
ಪುರಾಣ ಪ್ರಸಿದ್ಧ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ ಸಿಕ್ಕಿದೆ. ತುಂಗಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಕರೋನ ಹಿನ್ನೆಲೆಯಲ್ಲಿ ಮೂರು ದಿನ ಸರಳವಾಗಿ ಜಾತ್ರೆ ನಡೆಯಲಿದೆ.
ರಾಮ ಕುಂಡದಲ್ಲಿ ಪುಣ್ಯ ಸ್ನಾನ
ಜಾತ್ರೆಯ ಮೊದಲ ದಿನ ತುಂಗಾ ನದಿಯಲ್ಲಿರುವ ರಾಮ ಕುಂಡದಲ್ಲಿ ಪುಣ್ಯ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಾವಿರಾರು ಜನರು ರಾಮ ಕುಂಡದಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಇದರಿಂದ ಪಾಪ ಪರಿಹಾರವಾಗಲಿದೆ ಎಂಬ ನಂಬಿಕೆ ಇದೆ. ಇದನ್ನು ಮಾತೃ ಹತ್ಯೆ ದೋಷ ಪರಿಹಾರದ ಪುಣ್ಯ ಸ್ಥಳ ಎಂದು ಕರೆಯಲಾಗುತ್ತಾದೆ.
ಏನಿದು ಮಾತೃ ಹತ್ಯೆ ದೋಷ ಪರಿಹಾರ?
ಋಷಿ ಜಮದಗ್ನಿಯು ತನ್ನ ಪತ್ನಿ ರೇಣುಕಾದೇವಿಯ ಶಿರಚ್ಛೇದನ ಮಾಡುವಂತೆ ಮಕ್ಕಳಿಗೆ ಸೂಚಿಸುತ್ತಾರೆ. ನಿರಾಕರಿಸಿದ ನಾಲ್ವರು ಮಕ್ಕಳು ಶಾಪಕ್ಕೆ ತುತ್ತಾಗುತ್ತಾರೆ. ಮಗ ಪರಶುರಾಮ ಮಾತ್ರ ತಾಯಿಯ ಶಿರಚ್ಛೇದ ಮಾಡುತ್ತಾನೆ. ಎಷ್ಟೆ ತೊಳೆದರೂ ಕೊಡಲಿಗೆ ಅಂಟಿದ್ದ ಎಳ್ಳಿನಷ್ಟು ರಕ್ತದ ಕಲೆ ಹಾಗೆ ಉಳಿಯುತ್ತದೆ.
ಮಾತೃಹತ್ಯೆ ದೋಷದಿಂದ ಪರಿಹಾರಕ್ಕೆ ಪರಶುರಾಮನು ಊರೂರು ಸುತ್ತುತ್ತಾನೆ. ಒಮ್ಮೆ ತುಂಗಾ ನದಿಯ ಬಳಿ ವಿಹರಿಸುವಾಗ ಆಕಸ್ಮಿಕವಾಗಿ ಕೊಡಲಿ ಕೈ ಜಾರಿ ಬಂಡೆಯೊಂದರ ಮೇಲೆ ಬೀಳುತ್ತದೆ. ಬಂಡೆ ಎರಡು ಭಾಗವಾಗುತ್ತದೆ. ಕೊಡಲಿಗೆ ತುಂಗಾ ನದಿ ನೀರು ಸೋಕಿ, ಅಂಟಿದ್ದ ರಕ್ತದ ಕಲೆ ಅಳಿಸಿ ಹೋಗುತ್ತದೆ. ಇದನ್ನು ಕಂಡು ಪುನೀತನಾದ ಪರಶುರಾಮ, ಮಾತೃಹತ್ಯೆ ದೋಷದಿಂದ ಮುಕ್ತನಾಗುತ್ತಾನೆ. ಬಂಡೆ ಸೀಳಿದ ಜಾಗವೆ ರಾಮ ಕುಂಡವಾಗಿದೆ. ಹಾಗಾಗಿ ಇಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ.
ರಾಮ ಕುಂಡದ ಬಳಿ ಪಲ್ಲಕ್ಕಿ ಪೂಜೆ
ಇವತ್ತು ಬೆಳಗಿನ ಜಾವ ತುಂಗಾ ನದಿಯಲ್ಲಿ ರಾಮ ಕುಂಡದ ಬಳಿ ಶ್ರೀ ರಾಮೇಶ್ವರ ದೇವರ ಉತ್ಸವ ಪಲ್ಲಕ್ಕಿಯ ಪೂಜಾ ಕಾರ್ಯ ನಡೆಯಿತು. ಪರಶುರಾಮ ಪ್ರತಿಷ್ಠಾಪಿಸಿದ ಈಶ್ವರ ಲಿಂಗವು ಇಲ್ಲಿದ್ದು, ಇದಕ್ಕೂ ಪೂಜೆ ಸಲ್ಲಿಸಲಾಯಿತು. ಆ ಬಳಿಕ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು, ರಾಮ ಕುಂಡದಲ್ಲಿ ಪವಿತ್ರ ಸ್ನಾನ ಮಾಡಿದರು. ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲ ಊರುಗಳಿಂದ ಭಕ್ತರು ಇಲ್ಲಿ ಬಂದು ಪುಣ್ಯ ಸ್ನಾನ ಮಾಡುತ್ತಾರೆ.
ದೇಗುಲಕ್ಕೆ ಭಕ್ತರ ಸಾಗರ
ಜಾತ್ರೆಯ ಮೊದಲ ದಿನವಾದ್ದರಿಂದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಬೆಳ್ಗೆಯಿಂದಲೇ ವಿವಿಧೆಡೆಯಿಂದ ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು, ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ.
ಇವತ್ತು ಪುಣ್ಯ ಸ್ನಾನ ನಡೆಯಲಿದೆ. ಸೋಮವಾರ ರಥೋತ್ಸವ ಇರಲಿದೆ. ಮಂಗಳವಾರ ರಾತ್ರಿ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಜನರು ತೀರ್ಥಹಳ್ಳಿಗೆ ಆಗಮಿಸುತ್ತಾರೆ.