SHIVAMOGGA LIVE | 4 JUNE 2023
HOSANAGARA : ಕಂದಾಯ ಭೂಮಿಯಲ್ಲಿ ಬೆಳೆದಿದ್ದ ಲಕ್ಷಾಂತರ ಮೌಲ್ಯದ ಶುಂಠಿಯನ್ನ ಅಧಿಕಾರಿಗಳು ನಾಶಪಡಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವರಾದ (Former Ministers) ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ದಿಢೀರ್ ಪ್ರತಿಭಟನೆ ನಡೆಸಿದರು. ಹೊಸನಗರ ತಾಲೂಕು ಕಚೇರಿ ಮುಂಭಾಗ ಮಾಜಿ ಸಚಿವರುಗಳ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಏನಿದು ಪ್ರಕರಣ?
ಕಚ್ಚಿಗೆಬೈಲು ಗ್ರಾಮದ ಮಹಿಳೆಯೊಬ್ಬರು ತಮ್ಮ ಖಾತೆ ಜಾಮೀನಿನ ಪಕ್ಕದ ಕಂದಾಯ ಭೂಮಿಯಲ್ಲಿ ಶುಂಠಿ ಬೆಳೆದಿದ್ದರು. ಒತ್ತುವರಿ ತೆರವು ನೆಪದಲ್ಲಿ ಅಧಿಕಾರಿಗಳು ಜೆಸಿಬಿ ಬಳಸಿ ಲಕ್ಷಾಂತರ ಮೌಲ್ಯದ ಶುಂಠಿ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ರಮ ಸಕ್ರಮೀಕರಣಕ್ಕೆ ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಬೇಲಿ ತೆರವು ನೆಪದಲ್ಲಿ ಬೆಳೆ ಹಾನಿ ಮಾಡಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಆಗಿರುವ ನಷ್ಟವನ್ನು ಭರಿಸಬೇಕು.
– ಆರಗ ಜ್ಞಾನೇಂದ್ರ, ಮಾಜಿ ಸಚಿವ
3 ಎಕರೆಗಿಂತಲು ಕಡಿಮೆ ಒತ್ತುವರಿ ತೆರವು ಮಾಡುವುದಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಬಗರ್ಹುಕುಂ ಅರ್ಜಿ ವಿಲೇ ಮಾಡದೆ ಯಾವ ನಿಯಮದ ಅಡಿ ಬೆಳೆ ನಾಶ ಮಾಡಲಾಗಿದೆ. ಹೊಸ ಸರ್ಕಾರ ಬಂದೊಡನೆ ಈ ರೀತಿಯ ಘಟನೆ ನಡೆಯುತ್ತಿರುವುದು ದುರದೃಷ್ಟಕರ.
– ಹರತಾಳು ಹಾಲಪ್ಪ, ಮಾಜಿ ಸಚಿವ
ನ್ಯಾಯ ಸಿಗುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಒತ್ತುವರಿ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಬೆಳೆ ಹಾನಿ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ – ಗಂಭೀರ ಸ್ಥಿತಿಗೆ ತಲುಪಿದ್ದ ಶಿವಮೊಗ್ಗದ ಸ್ನೇಕ್ ಕಿರಣ್ ಈಗ ಹೇಗಿದ್ದಾರೆ? ಆ ದಿನ ಹಾವು ಕಚ್ಚಿದ್ದು ಹೇಗೆ?
ಸಂತ್ರಸ್ತ ಕುಟುಂಬದ ರುಕ್ಮಿಣಿ, ಶಿವಮೊಗ್ಗ ರಾಜು, ಬಿಜೆಪಿ ಮುಖಂಡರಾದ ಉಮೇಶ್ ಕಂಚುಗಾರ್, ದೇವಾನಂದ, ಗಣಪತಿ ಬೆಳೆಗೋಡು, ಸುರೇಶ್ ಸ್ವಾಮಿರಾವ್, ಎಂ.ಎನ್.ಸುಧಾಕರ್, ಗುರುರಾಜ್, ರಮೇಶ್ ಶೆಟ್ಟಿ ಸೇರಿದಂತೆ ಹಲವರು ಇದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ