ಶಿವಮೊಗ್ಗ ಲೈವ್.ಕಾಂ |SHIMOGA NEWS | 9 DECEMBER 2020
ಮೂರು ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಇವತ್ತು ಪುನಃ ವ್ಯಾಪಾರ, ವಹಿವಾಟು ಆರಂಭವಾಗಿತ್ತು. ಕರ್ಫ್ಯೂ ಸಡಿಲಿಕೆ ಅವಧಿ ಮುಕ್ತಾಯವಾಗುತ್ತಿದ್ದಂತೆ, ಪೊಲೀಸರು ಗಾಂಧಿ ಬಜಾರನ್ನು ಪೂರ್ತಿ ಬಂದ್ ಮಾಡಿಸಿದರು.
ಹೂವು, ಹಣ್ಣು, ತರಕಾರಿ
ಗಾಂಧಿ ಬಜಾರ್ನಲ್ಲಿ ಹೂವು, ಹಣ್ಣು, ತರಕಾರಿ ಖರೀದಿಗೆ ಜನ ಸೇರಿದ್ದರು. ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯ ಜನರು ಬಂದಿದ್ದರು. ಬಹುತೇಕ ಎಲ್ಲ ತರಕಾರಿ ಅಂಗಡಿಗಳ ಬಾಗಿಲು ತೆಗೆಯಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ವ್ಯಾಪಾರ ಆರಂಭವಾಗಿತ್ತು.
ದಿನಸಿ, ಗ್ರಂಥಿಕೆ ಅಂಗಡಿಗಳಿಗೂ ಗ್ರಾಹಕರು
ದಿನಸಿ ಮತ್ತು ಗ್ರಂಥಿಕೆ ಅಂಗಡಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇದ್ದರು. ಹೋಲ್ ಸೇಲ್ ಮಾರಾಟಗಾರರು ಇಲ್ಲಿರುವುದರಿಂದ ನಗರದ ಬೇರೆ ಬೇರೆ ಕಡೆಯಿಂದ ಗ್ರಾಹಕರು ಬಂದು ಖರೀದಿ ಮಾಡಿದರು.
ಜವಳಿ, ಆಭರಣ ವ್ಯಾಪಾರಿಗಳಿಗೆ ಬರೆ
ಕರೋನ ಲಾಕ್ಡೌನ್ನಿಂದಾಗಿ ಜವಳಿ, ಆಭರಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಈಗ ಕರ್ಫ್ಯೂನಿಂದಾಗಿ ಗಾಯದ ಮೇಲೆ ಬರೆ ಬಿದ್ದ ಹಾಗೆ ಆಗಿದೆ. ಬೆಳಗ್ಗೆ 7 ರಿಂದ 11 ಗಂಟೆವರೆಗೆ ಕರ್ಫ್ಯೂಗೆ ರಿಲೀಫ್ ಸಿಕ್ಕಿದೆ. ಆದರೆ ಜವಳಿ ಮತ್ತು ಆಭರಣ ಖರೀದಿಗೆ ಗ್ರಾಹಕರು ಇಲ್ಲದೆ, ವ್ಯಾಪಾರಿಗಳು ತಲೆ ಮೇಲೆ ಕೈ ಹೊತ್ತು ಕೂರುವಂತಾಯಿತು.
VIDEO REPORT
ಹನ್ನೊಂದಕ್ಕೆ ಎಲ್ಲವು ಬಂದ್
ಹನ್ನೊಂದು ಗಂಟೆ ಆಗುತ್ತಿದ್ದಂತೆ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು. ಮೈಕ್ ಮೂಲಕ ಅನೌನ್ಸ್ ಮಾಡುತ್ತಾ, ಅಂಗಡಿಗಳ ಬಾಗಿಲು ಹಾಕಿಸಿದರು. ಗಾಂಧಿ ಬಜಾರ್ಗೆ ಬಂದಿದ್ದ ಗ್ರಾಹಕರನ್ನು ಹೊರಗೆ ಕಳುಹಿಸಿದರು. ಕೆಲವೇ ನಿಮಿಷದಲ್ಲಿ ಇಡೀ ಗಾಂಧಿ ಬಜಾರ್ ಸ್ಥಬ್ಧವಾಯಿತು.
ಬಿ.ಹೆಚ್.ರಸ್ತೆ ಟ್ರಾಫಿಕ್ ಜಾಮ್
ಇತ್ತ ಕರ್ಫ್ಯೂ ರಿಲೀಫ್ ಅವಧಿಯಲ್ಲಿ ಬಿ.ಹೆಚ್.ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕರ್ನಾಟಕ ಸಂಘದದಿಂದ ಎ.ಎ.ಸರ್ಕಲ್ವರೆಗೆ ಒನ್ ವೇ ರಸ್ತೆಯಲ್ಲಿ, ಎರಡು ಬದಿಯ ವಾಹನಗಳನ್ನು ಸಂಚರಿಸುವಂತೆ ಮಾಡಲಾಗಿದೆ. ಇದರಿಂದ ಗಾಂಧಿ ಬಜಾರ್ ಬಳಿಯಲ್ಲಿ ಭಾರಿ ವಾಹನ ದಟ್ಟಣೆ ಉಂಟಾಯಿತು. ಕೂಡಲೆ ಪೊಲೀಸರು ಎರಡು ಬದಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]