ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021
ಇಲ್ಲಿ ಪ್ರತಿ ತಿಂಗಳು ಮೂರ್ನಾಲ್ಕು ಅಪಘಾತ ಫಿಕ್ಸ್. ಎಲ್ಲಕ್ಕೂ ಕಾರಣ ಈ ಅವೈಜ್ಞಾನಿಕ ಕಾಂಕ್ರಿಟ್ ಕಟ್ಟೆ.
ಇದು ಶಿವಮೊಗ್ಗದ ಗಾಂಧಿ ನಗರ ಸರ್ಕಲ್ನಲ್ಲಿರುವ ಕಾಂಕ್ರಿಟ್ ಕಟ್ಟೆ. ಸರ್ಕಲ್ನ ಮಧ್ಯದಲ್ಲೇ ಇದ್ದು, ಅತ್ಯಂತ ಕಡಿಮೆ ಎತ್ತರದ್ದಾಗಿರುವುದರಿಂದ ವಾಹನ ಸವಾರರಿಗೆ ದಿಢೀರನೆ ಈ ಕಟ್ಟೆ ಗೊತ್ತಾಗುವುದಿಲ್ಲ. ಇದೇ ಕಾರಣಕ್ಕೆ ವಾರಕ್ಕೊಂದಾದರೂ ಅಪಘಾತ ಸಂಭವಿಸುತ್ತಿದೆ.
ಅಪರೂಪಕ್ಕೆ ಬಂದವರು ಅಪಘಾತಕ್ಕೀಡಾಗ್ತಾರೆ
ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವವರಿಗಷ್ಟೆ ಇಲ್ಲೊಂದು ಕಟ್ಟೆ ಇದೆ ಅನ್ನುವುದು ಗೊತ್ತಾಗುತ್ತದೆ. ಅಪರೂಪಕ್ಕೆ ಬರುವವರು ಇಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಸುಮಾರು ಮೂರು ಕಾರುಗಳು ಈ ಕಟ್ಟೆಗೆ ಗುದ್ದಿಕೊಂಡು, ಮೇಲೆ ಹತ್ತಿ ನಿಂತಿವೆ. ಬೈಕ್ ಸವಾರರು ಈ ಕಾಂಕ್ರಿಟ್ ಕಟ್ಟೆಗೆ ಗುದ್ದಿಕೊಂಡು ಗಾಯಾಗೊಂಡಿದ್ದಾರೆ.
ಇಲ್ಲಿ ಕಟ್ಟೆ ಕಟ್ಟಿರುವುದು ಏಕೆ?
ಕುವೆಂಪು ರಸ್ತೆ ಕಡೆಯಿಂದ ಗಾಂಧಿ ನಗರ ಸರ್ಕಲ್, ಅಲ್ಲಿಂದ ನೂರು ಅಡಿ ರಸ್ತೆಗೆ ಕನೆಕ್ಷನ್ ಇರುವ ರಸ್ತೆ ಇದು. ಈ ರಸ್ತೆಯಲ್ಲಿರುವ ಚರಂಡಿಯು ಗಾಂಧಿ ನಗರ ಸರ್ಕಲ್ನಲ್ಲಿ ಹಾದು ಹೋಗುತ್ತದೆ.
ಈ ಚರಂಡಿಯ ಮೇಲೆ ಸುಮಾರು ಒಂದು ಅಡಿಯಷ್ಟು ಎತ್ತರದ ಕಾಂಕ್ರಿಟ್ ಕಟ್ಟೆ ನಿರ್ಮಿಸಲಾಗಿದೆ. ಮೊದಲು ಇಲ್ಲಿ ಕಟ್ಟೆ ಇರಲಿಲ್ಲ. ಕೆಲವು ವರ್ಷದ ಹಿಂದೆ ರಸ್ತೆ ನಿರ್ಮಾಣ, ಹೊಸದಾಗಿ ಚರಂಡಿ ನಿರ್ಮಿಸಿದಾಗ ಕಟ್ಟೆ ಕಟ್ಟಲಾಗಿದೆ.
ಕಾಂಕ್ರಿಟ್ ಕಟ್ಟೆ ಇರುವುದು ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಗೊತ್ತಾಗುವುದೇ ಇಲ್ಲ. ಯಾಕಂದರೆ ಈ ಕಾಂಕ್ರಿಟ್ ಕಟ್ಟೆಯು ಮುಖ್ಯರಸ್ತೆಯಿಂದ ಎಎನ್ಕೆ ರೆಸ್ತೆ ಕಡೆಗೆ ಹೋಗುವ ಕಡೆಯಲ್ಲಿದೆ.
ರಾತ್ರಿ ವೇಳೆ ಈ ಕಾಂಕ್ರಿಟ್ ಕಟ್ಟೆ ಇರುವ ಕಡೆಯಲ್ಲಿ ಲೈಟ್ ಬೆಳಕು ಕೂಡ ಬೀಳುವುದಿಲ್ಲ.
‘ಇಲ್ಲಿ ಕಟ್ಟೆ ಕಟ್ಟಿದ್ದೇಕೆ ಅನ್ನುವುದೆ ಗೊತ್ತಾಗುತ್ತಿಲ್ಲ. ಇದರಿಂದಾಗಿ ಅಪಘಾತಗಳು ಆಗ್ತಿವೆ. ಅಧಿಕಾರಿಗಳಿಗೆ ವಿಚಾರಿಸಿದರೆ ಯಾರೊಬ್ಬರು ಈ ಬಗ್ಗೆ ತಲೆ ಕಡಿಸಿಕೊಳ್ಳುತ್ತಿಲ್ಲ. ಅವರಿಗೆಲ್ಲ ಇದು ಸಣ್ಣ ವಿಚಾರ ಅನಿಸುತ್ತೆ.’ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಕಿರಣ್.
‘ಈ ಕಟ್ಟೆಯ ಕಾರಣಕ್ಕೆ ಈ ತಿಂಗಳು ಮೂರು ಅಪಘಾತಗಳಾಗಿವೆ. ಕಾರಿನಲ್ಲಿ ಬರುವವರಿಗಂತೂ ಇಲ್ಲೊಂದು ಕಟ್ಟೆ ಇದೆ ಅನ್ನುವುದು ಗೊತ್ತಾಗುವುದಿಲ್ಲ. ಯಾಕಾಗಿ ಈ ಕಟ್ಟೆ ಕಟ್ಟಿದ್ದಾರೆ ಅನ್ನುವುದು ಯಾರಿಗೂ ಗೊತ್ತಿಲ್ಲ’ ಅಂತಾರೆ ಉದ್ಯಮಿ ಆದಿತ್ಯ.
ಈ ಭಾಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಈ ಕಟ್ಟೆಯನ್ನು ತೆಗೆದು, ವಾಹನ ಸವಾರರ ಪ್ರಾಣ ಉಳಿಸಬೇಕಿದೆ ಅಂತಾರೆ ಸ್ಥಳೀಯರು. ಅಧಿಕಾರಿಗಳು ಇತ್ತ ಗಮನ ಹರಿಸಿ, ಕಟ್ಟೆಗೆ ಮುಕ್ತಿ ನೀಡಬೇಕಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]