SHIVAMOGGA LIVE | 4 AUGUST 2023
THIRTHAHALLI : ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು (King Cobra) ರಕ್ಷಿಸಿ, ಶಾಸ್ತ್ರಚಿಕಿತ್ಸೆ ಬಳಿಕ ಕಾಡಿಗೆ ಬಿಡಲಾಗಿದೆ. ಇದರ ವಿಡಿಯೋವನ್ನು ಕಾಳಿಂಗ ಫೌಂಡೇಶನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ.
ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡಿತ್ತು. ಮಾಹಿತಿ ಲಭಿಸುತ್ತಿದ್ದಂತೆ ಕಾಳಿಂಗ ಫೌಂಡೇಶನ್ ಸದಸ್ಯರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ.
ಗಾಯಗೊಂಡಿದ್ದ ಕಾಳಿಂಗ ಸರ್ಪ ರಕ್ಷಣೆ
ಶಿವಮೊಗ್ಗ ಲೈವ್.ಕಾಂ ಜೊತೆ ಮಾತನಾಡಿದ ಕಾಳಿಂಗ ಫೌಂಡೇಶನ್ ವ್ಯವಸ್ಥಾಪಕ ಪ್ರಶಾಂತ್, ‘ಮನೆಯೊಳಗೆ ಹಾವು ಸೇರಿದ್ದರೆ ಮಾತ್ರ ಅದನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ. ಆದರೆ ಕಮ್ಮರಡಿಯಲ್ಲಿ ಮನೆಯ ಪಕ್ಕದಲ್ಲಿ ಹಾವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಮಕ್ಕಳಿದ್ದಾರೆ ಎಂದು ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಪರಿಶೀಲಿಸಿದೆವು. ಆಗ ಕಾಳಿಂಗ ಸರ್ಪಕ್ಕೆ ಗಾಯವಾಗಿರುವ ವಿಚಾರ ಗೊತ್ತಾಯಿತು. ಕೂಡಲೆ ಅದನ್ನು ಹಿಡಿದು ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಲಾಯಿತು. ಮರುದಿನ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತುʼ ಎಂದು ತಿಳಿಸಿದರು.
ಕಾಳಿಂಗ ಸರ್ಪಕ್ಕೆ ಆಪರೇಷನ್
ಆರೈಕೆ ಬಳಿಕ ಕಾಡಿಗೆ ಕಾಳಿಂಗ
ಶಸ್ತ್ರಚಿಕಿತ್ಸೆ ಬಳಿಕ ಕಾಳಿಂಗ ಫೌಂಡೇಶನ್ನಲ್ಲಿಯೇ ಕಾಳಿಂಗ ಸರ್ಪಕ್ಕೆ ಆರೈಕೆ ಮಾಡಲಾಗಿದೆ. ಗಾಯ ಮಾಗುವ ವಾತಾವರಣ ಸೃಷ್ಟಿಸಿ, ನಿತ್ಯ ಪರಿಶೀಲನೆ ನಡೆಸಲಾಯಿತು. ಮೂರ್ನಾಲ್ಕು ದಿನದ ಬಳಿಕ ಆರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗ ಸರ್ಪವನ್ನು ಅರಣ್ಯಕ್ಕೆ ಬಿಡಲಾಗಿದೆ. ಇದರ ವಿಡಿಯೋವನ್ನು ಕಾಳಿಂಗ ಫೌಂಡೇಶನ್ ತನ್ನ ಇನ್ಸ್ಟ್ರಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ. ಜನರು ಕಾಳಿಂಗ ಫೌಂಡೇಶನ್ ಮತ್ತು ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏನಿದು ಕಾಳಿಂಗ ಫೌಂಡೇಶನ್?
ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಕಾಳಿಂಗ ಸೆಂಟರ್ ಫಾರ್ ರೈನ್ಫಾರೆಸ್ಟ್ ಇಕಾಲಜಿ ಎಂಬ ಸಂಸ್ಥೆ ಇದೆ. ಹರ್ಪಿಟಾಲಜಿಸ್ಟ್ ಪಿ. ಗೌರಿ ಶಂಕರ್ ಅವರು ಈ ಸಂಸ್ಥೆ ಆರಂಭಿಸಿದ್ದಾರೆ. ಕಾಳಿಂಗ ಸರ್ಪದ ಕುರಿತು ಸಂಶೋಧನೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆಸಕ್ತರು ಸಂಸ್ಥೆಗೆ ಭೇಟಿ ನೀಡಿ ಕಾಳಿಂಗ ಸರ್ಪದ ಕುರಿತು ಕುತೂಹಲಕರ ಮಾಹಿತಿ ಪಡೆಯಬಹುದಾಗಿದೆ. ವನ್ಯಜೀವಿ ವಲಯದಲ್ಲಿ ಕಾಳಿಂಗ ಫೌಂಡೇಷನ್ಗೆ ವಿಶೇಷ ಹೆಸರಿದೆ.
ಇದನ್ನೂ ಓದಿ – 25 ಕೆ.ಜಿ ಅಕ್ಕಿ, 5 ಕೆ.ಜಿ ಟೊಮೆಟೊ, ದಿನಸಿ ಪೂರೈಸುವಂತೆ ಪ್ರಾಂಶುಪಾಲರಿಗೆ ಅತಿಥಿ ಉಪನ್ಯಾಸಕರ ಮನವಿ, ಕಾರಣವೇನು?