SHIVAMOGGA LIVE NEWS | 7 AUGUST 2023
SHIMOGA : ಗುಡ್ಡೇಕಲ್ನ ಆಡಿಕೃತ್ತಿಕೆ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಜಾತ್ರೆಗೆ ಬರುವ ಭಕ್ತರು ಅಕ್ಷರಶಃ ಕಲ್ಲು ಮುಳ್ಳಿನ (stones) ಹಾದಿಯಲ್ಲೇ ಕ್ರಮಿಸಿ ದೇವರ ದರ್ಶನ ಪಡೆಯಬೇಕಾಗಿದೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ಗುಡ್ಡೇಕಲ್ನ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಹಾನಿಯಾಗಿದೆ. ರಸ್ತೆಯ ತುಂಬೆಲ್ಲ ಜೆಲ್ಲಿ ಕಲ್ಲು ಹರಡಿಕೊಂಡಿದೆ. ಇದೆ ಹಾದಿಯಲ್ಲೆ ಭಕ್ತರು ಕಾವಡಿ ಹೊತ್ತು ಸಾಗಬೇಕಿದೆ.
ಇದನ್ನೂ ಓದಿ – ಶಿವಮೊಗ್ಗದ ‘ಹರೋಹರ ಜಾತ್ರೆ’ ದಿನಾಂಕ ಘೋಷಣೆ, ಜುಲೈ ಬದಲು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವುದೇಕೆ?
ಕಾವಡಿ ಹೊತ್ತವರಿಗೆ ಈ ಬಾರಿ ಸವಾಲು
ಆಡಿಕೃತ್ತಿಕೆ ಜಾತ್ರೆ ತಮಿಳು ಸಮುದಾಯದವರ ಪಾಲಿಗೆ ಪ್ರಮುಖ ಆಚರಣೆ. ಶಿವಮೊಗ್ಗ, ಭದ್ರಾವತಿಯ ತಮಿಳು ಭಾಷಿಕರು ಜಾತ್ರೆ ವೇಳೆ ಗುಡ್ಡೇಕಲ್ನಲ್ಲಿ ದೇವರ ದರ್ಶನ ಪಡೆಯುತ್ತಾರೆ. ಸಾವಿರಾರು ಮಂದಿ ಕಾವಡಿ ಹೊತ್ತು, ಕೆನ್ನೆ, ತುಟಿಗೆ ದೊಡ್ಡ ತ್ರಿಶೂಲಗಳನ್ನು ಚುಚ್ಚಿಕೊಂಡು ಬರುತ್ತಾರೆ. ದೂರದಿಂದ ಕಾವಡಿ ಹೊತ್ತು ವಾದ್ಯದ ಶಬ್ದಕ್ಕೆ ಕುಣಿಯುತ್ತ ಬಂದು ಗುಡ್ಡ ಹತ್ತಿ ದೇವರ ಮುಂದೆ ಕಾವಡಿ ಇಳಿಸಿ ಹರಕೆ ತೀರಿಸುತ್ತಾರೆ. ಈ ಬಾರಿ ಭಕ್ತರಿಗೆ ರಸ್ತೆ ಮೇಲೆ ಹರಡಿಕೊಂಡಿರುವ ಜೆಲ್ಲಿ (stones) ದೊಡ್ಡ ಸವಾಲಾಗಲಿದೆ.
ಎರಡು ಬದಿಯಲ್ಲೂ ಜೆಲ್ಲಿ, ಮಳೆ ಬಂದರೆ ಕೆಸರು
ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆ ವಾಹನಗಳ ಅನುಕೂಲಕ್ಕೆ ಎರಡು ಬದಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾರಿ ವಾಹನಗಳ ಸಂಚಾರ ಮತ್ತು ಕಾಮಗಾರಿಯ ಕಾರಣಕ್ಕೆ ರಸ್ತೆಯ ಎರಡು ಬದಿ ಹಾನಿಯಾಗಿದೆ. ಜೆಲ್ಲಿ ಕಲ್ಲುಗಳು ರಸ್ತೆಯ ತುಂಬೆಲ್ಲ ಹರಡಿಕೊಂಡಿದೆ. ಮಳೆ ಬಂದರೆ ಈ ರಸ್ತೆ ಕೆಸರುಮಯವಾಗುತ್ತದೆ. ಗುಡ್ಡೇಕಲ್ ಜಾತ್ರೆ ಸಂದರ್ಭ ಮಳೆ ಬರುವುದು ಪ್ರತೀತಿ. ಜೋರು ಮಳೆಯಾದರೆ ಕಾವಡಿ ಹೊತ್ತವರು ಕೆಸರಿನಲ್ಲಿಯೇ ಸಾಗಬೇಕು. ಇದರ ಜೊತೆಗೆ ಕಲ್ಲುಗಳು ಕೂಡ ಕಾಲಿಗೆ ಚುಚ್ಚಲಿವೆ.
ಇದನ್ನೂ ಓದಿ – ಮಲೇಷಿಯಾ, ಸೇಲಂಗಿಂತಲು ಶಿವಮೊಗ್ಗದಲ್ಲಿ ಅತಿ ಎತ್ತರದ ಪ್ರತಿಮೆ, ಹೇಗಿರುತ್ತೆ? ಇಲ್ಲಿದೆ 7 ಪ್ರಮುಖ ವಿಶೇಷತೆ
ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಜಾತ್ರೆ ಸಂದರ್ಭ ಸುರಕ್ಷತೆ ದೃಷ್ಟಿಯಿಂದ ರಸ್ತೆಯನ್ನು ಸ್ವಚ್ಚಗೊಳಿಸಿದ್ದರೆ ಅನುಕೂಲ ಎಂಬುದು ಭಕ್ತರ ಅಭಿಪ್ರಾಯ.