ಶಿವಮೊಗ್ಗ ಲೈವ್.ಕಾಂ | SHIMOGA NEWS | 24 APRIL 2021
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ದೊಡ್ಡ ಸಂಖ್ಯೆಯಲ್ಲಿದ್ದರು. ಬೇರೆ ಊರುಗಳಿಂದ ಬಂದವರು, ಬೆರೆಡೆಗೆ ತೆರಳುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಈ ನಡುವೆ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಲು ಪ್ರಯಾಣಿಕರು ನಿರ್ಲಕ್ಷ ವಹಿಸಿದ್ದರು.
ಸಾಮಾನ್ಯ ದಿನದಂತಿತ್ತು ಪ್ರಯಾಣಿಕರ ಸಂಖ್ಯೆ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾಮಾನ್ಯ ದಿನದಷ್ಟೆ ಪ್ರಯಾಣಿಕರಿದ್ದರು. ಪರ ಊರುಗಳಿಗೆ ತೆರಳಲು ಮತ್ತು ಬೇರೆಡೆಯಿಂದ ಶಿವಮೊಗ್ಗಕ್ಕೆ ಬರುವವರ ಸಂಖ್ಯೆ ಸಾಮಾನ್ಯ ದಿನದಂತೆಯೇ ಇತ್ತು.
ಬಸ್ಸಿಗಾಗಿ ಸಿಬ್ಬಂದಿಗಳ ಜೊತೆಗೆ ಕಿರಿಕ್
ಕರ್ಫ್ಯೂ ಹಿನ್ನೆಲೆ ಬಸ್ಸುಗಳ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ಪ್ರಯಾಣಿಕರು ಬಸ್ಸಿಗಾಗಿ ಕೆಎಸ್ಆರ್ಟಿಸಿ ಸಿಬ್ಬಂದಿ ಬಳಿ ವಿಚಾರಿಸಿ, ಆಗಾಗ ಜಗಳವಾಡುತ್ತಿದ್ದರು. ಬಸ್ಸುಗಳು ಭರ್ತಿಯಾದರಷ್ಟೆ ಅವುಗಳು ನಿಲ್ದಾಣದಿಂದ ಹೊರಗೆ ಹೋಗುತ್ತಿದ್ದವು. ಇದು ಕೂಡ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಬ್ಬಂದಿಗಳು ಬೇಕಂತಲೇ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು.
ಸಮಾಜಿಕ ಅಂತರವಿಲ್ಲ, ಮಾಸ್ಕ್ ಹಾಕಲ್ಲ
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದನ್ನು ಮರೆತಂತಿತ್ತು. ಕೆಎಸ್ಆರ್ಟಿಸಿ ಸಿಬ್ಬಂದಿ ಮೈಕ್ ಹಿಡಿದು ಅನೌನ್ಸ್ ಮಾಡಿ, ಪ್ರಯಾಣಿಕರನ್ನು ಆಗಾಗ ಎಚ್ಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುತ್ತಿದ್ದ ಪ್ರಯಾಣಿಕರು ಬಳಿಕ ಅದನ್ನು ಮರೆತುಬಿಡುತ್ತಿದ್ದರು.
ಬೆರಳೆಣಿಕೆಯಷ್ಟು ಖಾಸಗಿ ಬಸ್
ಇನ್ನು, ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆರಳೆಣಿಕೆಯಷ್ಟು ಖಾಸಗಿ ಬಸ್ಸುಗಳು ಮಾತ್ರ ರಸ್ತೆಗಿಳಿದಿದ್ದವು. ಪ್ರಮುಖ ರೂಟ್ಗಳಲ್ಲಿ ಮಾತ್ರ ಬಸ್ಸುಗಳು ಸಂಚರಿಸಿವೆ. ಆದರೆ ಆ ಬಸ್ಸುಗಳಿಗೂ ನಿಗದಿಯಷ್ಟು ಪ್ರಯಾಣಿಕರಿಲ್ಲದೆ ನಷ್ಟದಲ್ಲೇ ಬಸ್ಸುಗಳು ಸಂಚರಿಸುತ್ತಿದ್ದವು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸ್ಥಿತಿಗತಿ ವಿಡಿಯೋ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]