ಶಿವಮೊಗ್ಗ ಲೈವ್.ಕಾಂ | 21 ಏಪ್ರಿಲ್ 2019
ಚುನಾವಣೆ ಬಳಿಕ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ವಿದೇಶದಲ್ಲಿ ಹುಡುಕುವಂತಾಗಿದೆ. ಅಂತಹ ಸ್ಥಿತಿ ಶಿವಮೊಗ್ಗಕ್ಕೂ ದೂರವಿಲ್ಲ ಅಂತಾ ಸೊರಬ ಶಾಸಕ ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಗಾಗಿ ವಿದೇಶದಿಂದ ಅಭ್ಯರ್ಥಿ ಕರೆಸಿಕೊಂಡಿದ್ದಾರೆ. ಚುನಾವಣೆ ಬಳಿಕ ಮತ್ತೆ ಅಭ್ಯರ್ಥಿಯನ್ನು ವಿದೇಶದಲ್ಲಿಯೇ ಹುಡುಕಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಇವರದ್ದು ಚುನಾವಣಾ ಶೋಕಿ
ಕೊಳೆರೋಗ, ಅತಿವೃಷ್ಟಿಯಾದಾಗ ಸಿಎಂ ಕುಮಾರಸ್ವಾಮಿ ಅವರನ್ನು ಕರೆದೆವು. ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಮನವಿ ಮಾಡಿದೆವು. ಆಗ ಕುಮಾರಸ್ವಾಮಿ ಅವರು ಈ ಕ್ಷೇತ್ರಕ್ಕೆ ಬರಲಿಲ್ಲ. ಆದರೆ ಚುನಾವಣೆ ಸಂದರ್ಭ, ಏಳೆಂಟು ದಿನ ಕ್ಷೇತ್ರದಲ್ಲಿ ಉಳಿದುಕೊಳ್ಳುತ್ತಾರೆ. ಇವರದ್ದು ಚುನಾವಣೆಯ ಶೋಕಿ ಎಂದು ಆರೋಪಿಸಿದರು.
ಕಾಗೋಡು ಮೂಲೆಗುಂಪು, ಮಧು ಸುಳ್ಳು
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಮೂಲೆಗಂಪು ಮಾಡಲಾಗಿದೆ. ಅವರ ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಅವರು ಆಡುತ್ತಿದ್ದ ಮಾತುಗಳಿಗೆ ಹಿನ್ನಡೆಯಾಗಿದೆ. ಹಾಗಾಗಿಯೇ ಬೇರೆ ಕಡೆ ಲೂಟಿ ಹೊಡೆದ ಹಣವನ್ನು ತಂದು ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಅವರು ಕರಪತ್ರದಲ್ಲಿ ಸುಳ್ಳು ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.
ರಸ್ತೆಯಾಗಿದೆ, ಚರಂಡಿ ಮಾಡಿಸಿದ್ದೇನೆ ಎಂದು ಕರಪತ್ರದಲ್ಲಿ ಪ್ರಿಂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ, ಬಗರ್’ಹುಕುಂನಲ್ಲಿ ಏಳು ಸಾವಿರ ಹಕ್ಕುಪತ್ರ ವಿತರಿಸಿರುವುದಾಗಿ ಕರಪತ್ರ ಹಂಚಿದ್ದಾರೆ. ಆದರೆ ತಹಶೀಲ್ದಾರ್ ಅವರು ಕೇವಲ ಮೂರೂವರೆ ಸಾವಿರ ಹಕ್ಕುಪತ್ರ ವಿತರಣೆಯಾಗಿದೆ ಎಂದಿದ್ದಾರೆ. ಮಧು ಬಂಗಾರಪ್ಪ ಕರಪತ್ರದಲ್ಲಿ ಶೇ.90ರಷ್ಟು ಸುಳ್ಳುಗಳಿವೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]