ಶಿವಮೊಗ್ಗ ಲೈವ್.ಕಾಂ | SAGARA NEWS | 1 ಅಕ್ಟೋಬರ್ 2020
ರಾಜ್ಯದಲ್ಲೇ ಮೊದಲ ಬಾರಿಗೆ ಕರೋನ ವಾರ್ಡ್ನಲ್ಲಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಆರೋಗ್ಯ ಇಲಾಖೆ ನೌಕರರು ಗ್ರಂಥಾಲಯ ಆರಂಭಿಸಿ, ಕರೋನ ಸೋಂಕಿತರಿಗೆ ಚಿಕಿತ್ಸೆ ವೇಳೆ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದಾರೆ.
ಮನೋಲ್ಲಾಸ ನೀಡುವ ಪುಸ್ತಕಗಳು
ಗ್ರಂಥಾಲಯದಲ್ಲಿ ಮನೋಲ್ಲಾಸ ನೀಡುವ ಪುಸ್ತಕಗಳನ್ನು ಇರಿಸಲಾಗುತ್ತಿದೆ. ಚಿಕಿತ್ಸೆಗೆ ದಾಖಲಾದವರು ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಬಹುದಾಗಿದೆ. ಇದರಿಂದ ಚಿಕಿತ್ಸೆ ಅವಧಿಯಲ್ಲಿ ಬೇಸರ ಕಳೆಯಲಿದೆ. ಅಲ್ಲದೆ ಅನ್ಯ ಯೋಚನೆಗಳಿಂದ ಮಾನಸಿಕವಾಗಿ ಕುಗ್ಗುವುದು ತಪ್ಪಲಿದೆ.
ಎಂಎಲ್ಎ, ಲೇಖಕ ಬಳಗ ಸಾಥ್
ತಾಲೂಕಿನ ಆರೋಗ್ಯ ಇಲಾಖೆ ನೌಕರರ ಸಂಘ, ರವೀಂದ್ರ ಪುಸ್ತಕಾಲಯ, ಶಾಸಕ ಹರತಾಳು ಹಾಲಪ್ಪ ಮತ್ತು ಹಲವು ಸಹೃದಯ ಲೇಖಕರು ಪುಸ್ತಕಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಪುಸ್ತಕಗಳನ್ನು ಉಚಿತವಾಗಿ ಕೊಡುವವರು ಸರ್ಕಾರಿ ಆಸ್ಪತ್ರೆ ಕ್ಷ-ಕಿರಣ ವಿಭಾಗಕ್ಕೆ ತಲುಪಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಸದ್ಯಕ್ಕೆ ಪುಸ್ತಕಗಳನ್ನು ಮಾತ್ರ ಗ್ರಂಥಾಲಯದಲ್ಲಿ ಇರಿಸಲಾಗಿದೆ. ಮುಂದೆ ದಿನಪತ್ರಿಕೆಗಳನ್ನು ಇರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಗ್ರಂಥಾಲಯ ಉದ್ಘಾಟನೆ ವೇಳೆ ಮಾತನಾಡಿದ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಆರ್.ಪ್ರಕಾಶ್ ಬೋಸ್ಲೆ, ಕರೋನಾಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ವೈದ್ಯರು ಸೂಚಿಸಿದಂತೆ ಔಷಧ ಮತ್ತು ವಿಶ್ರಾಂತಿ ಅಗತ್ಯವಿದೆ. ರೋಗಿಗಳು ಸಾಹಿತ್ಯಿಕವಾಗಿ ತಮ್ಮ ಮನಸ್ಸನ್ನು ಉಲ್ಲಾಸಗೊಳಿಸಿಕೊಂಡರೆ ಬೇಗ ಗುಣವಾಗಬಹುದು ಎಂದರು.
ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ, ಪ್ರಭಾರ ನರ್ಸಿಂಗ್ ಅಧೀಕ್ಷಕ ಜುಬೇದಾ ಅಲಿ, ಆರೋಗ್ಯ ಇಲಾಖೆ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಮೋಹನ್, ಪದಾಧಿಕಾರಿಗಳಾದ ಗುರುಶಾಂತಪ್ಪ, ರಾಜಶೇಖರ್ ಹೆಚ್.ಈಳಿಗೇರ್, ಆರ್.ಎನ್.ರವಿ, ಬಾಲಚಂದ್ರ, ರವಿ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]