ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2020
ಶಿವಮೊಗ್ಗ ಮಹಾನಗರ ಪಾಲಿಕೆಗೂ ಕರೋನ ಬಿಸಿ ತಟ್ಟಿದೆ. ಸೋಮವಾರದವರೆಗೆ ಪಾಲಿಕೆ ಕಚೇರಿಯನ್ನು ಬಂದ್ ಮಾಡಲಾಗಿದೆ. ಆವರಣವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಪಾಲಿಕೆಯ ಅಕೌಂಟ್ಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಕರೋನ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಇಡೀ ಪಾಲಿಕೆ ಆವರಣವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಡೀ ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಸೋಮವಾರದವರೆಗೆ ಎಲ್ಲವು ಸ್ಥಗಿತ
ಇವತ್ತು ಬೆಳಗ್ಗೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಈ ವೇಳೆಗಾಗಲೇ ಪಾಲಿಕೆಯನ್ನು ಸೀಲ್ಡೌನ್ ಮಾಡಿರುವ ವಿಚಾರ ತಿಳಿಸಲಾಯಿತು. ಹಾಗಾಗಿ ಪಾಲಿಕೆಯ ಮುಖ್ಯ ಗೇಟ್ ಬಂದ್ ಮಾಡಿದ ಸಿಬ್ಬಂದಿಗಳು, ಸೋಮವಾರದವರೆಗೆ ಯಾರಿಗೂ ಪ್ರವೇಶವಿಲ್ಲ ಎಂದು ಬೋರ್ಡು ಹಾಕಿದ್ದಾರೆ.
ಪಾಲಿಕೆ ಕಮಿಷನರ್ ಕ್ವಾರಂಟೈನ್ಗೆ
ಅಧಿಕಾರಿಯೊಬ್ಬರಿಗೆ ಸೋಂಕು ತಗುಲಿದ ವಿಚಾರ ತಿಳಿಯುತ್ತಿದ್ದಂತೆ ಅವರೊಂದಿಗೆ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್ನಲ್ಲಿ ಇರುವಂತೆ ಸೂಚಿಸಲಾಗಿದೆ. ಮಹಾನಗರ ಪಾಲಿಕೆ ಕಮಿಷನರ್ ಅವರು ಶಿವಮೊಗ್ಗದ ಐಬಿಯಲ್ಲಿ ಕ್ವಾರಂಟೈನ್ ಆಗಿದ್ದಾರೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.
ಉಪಮೇಯರ್, ಕಾರ್ಪೊರೇಟರ್ಗಳಿಗೆ ನೋ ಎಂಟ್ರಿ
ಇನ್ನು, ಕಾರ್ಯನಿಮಿತ್ತ ಪಾಲಿಕೆಗೆ ಆಗಮಿಸಿದ ಕಾರ್ಪೊರೇಟರ್ಗಳಿಗೂ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಕಾರ್ಪೊರೇಟರ್ ಜ್ಞಾನೇಶ್ವರ್ ಅವರು ಗೇಟ್ನಿಂದ ಹೊರಗೆ ನಿಂತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದರು. ಇನ್ನು ಉಪಮೇಯರ್ ಸುರೇಖಾ ಮುರಳೀಧರ್ ಅವರು ಆವರಣದೊಳಗೆ ತೆರಳಿ, ಸ್ಯಾನಿಟೈಸ್ ಕುರಿತು ಮಾಹಿತಿ ಪಡೆದು ಹಿಂತಿರುಗಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]