ಶಿವಮೊಗ್ಗ ಲೈವ್.ಕಾಂ | SHIMOGA | 28 ಮಾರ್ಚ್ 2020
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇವತ್ತು ನಗರದ ವಿವಿಧೆಡೆ ಭೇಟಿ ನೀಡಿದರು. ಈ ವೇಳೆ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದವರಿಗೆ ಮನವಿ ಮಾಡಿ, ಬಾಗಿಲು ಹಾಕಿಸಿದರು.
ಕರೋನ ವೈರಸ್ ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ಸಚಿವ ಈಶ್ವರಪ್ಪ ಅವರು ಸಿಟಿ ರೌಂಡ್ಸ್ ಹಾಕಿದರು. ಮೊದಲು ಗಾಂಧಿ ಬಜಾರ್’ಗೆ ತೆರಳಿದ ಅವರು, ಅಗತ್ಯ ವಸ್ತು ಅಲ್ಲದಿದ್ದರು ಅಂಗಡಿ ಬಾಗಿಲು ತೆಗೆದು ವ್ಯಾಪಾರ ಮಾಡುತ್ತಿರುವುದನ್ನು ಗಮನಿಸಿದರು. ಅಂಗಡಿ ಮಾಲೀಕರಿಗೆ ಕೈ ಮುಗಿದು ಬಾಗಿಲು ಹಾಕುವಂತೆ ಮನವಿ ಮಾಡಿದರು.
ಗಾಂಧಿ ಬಜಾರ್’ನ ತರಕಾರಿ ಮಾರುಕಟ್ಟೆಗು ಸಚಿವರು ಭೇಟಿ ನೀಡಿದರು. ಕರೋನ ಯಾರಿಗೆ ಬಂದರೂ ಸಮಸ್ಯೆ ಆಗಲಿದೆ ಎಂದು ಕೆಲವು ಅಂಗಡಿ ಮಾಲೀಕರಿಗೆ ತಿಳಿಸಿ, ಕೂಡಲೇ ಬಾಗಿಲು ಹಾಕಿ ಎಂದರು.
ಬಳಿಕ ವಿನೋಬನಗರದ ಇಂದಿರಾ ಕ್ಯಾಂಟೀನ್’ಗೆ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಕ್ಯಾಂಟೀನ್’ನಲ್ಲಿ ಊಟ ಮತ್ತು ತಿಂಡಿಯ ವಿವರ ಪಡೆದರು. ಅಲ್ಲಿಂದ ಎಪಿಎಂಸಿ ಮಾರುಕಟ್ಟೆಗೆ ತೆರಳಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಜಿಲ್ಲಾ ಪಂಚಾಯಿತಿ ಸದಸ್ಯ ಕಾಂತೇಶ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]