SHIVAMOGGA LIVE | 29 JUNE 2023
SHIMOGA : ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ (Drinking Water) ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಅಗತ್ಯವಿದೆಯೋ ಅಲ್ಲೆಲ್ಲ ಜಲಜೀವನ ಮಿಷನ್ ಮತ್ತು 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಕೊಳವೆ ಬಾವಿ ಕೊರೆಸುವಂತೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕಿ, ಕುಡಿಯುವ ನೀರಿಗಾಗಿ (Drinking Water) ಟಾಸ್ಕ್ ಫೋರ್ಸ್ ಬಿಡುಗಡೆ ಮಾಡುವ ಅನುದಾನಕ್ಕೆ ಕಾಯುವುದು ಬೇಡ. ಜಲ ಜೀವನ ಮಿಷನ್ ಯೋಜನೆಯ ಅನುದಾನವನ್ನು ಹಿಂದಕ್ಕೆ ಕಳುಹಿಸದೆ ಮತ್ತು 15ನೇ ಹಣಕಾಸು ಯೋಜನೆ ಅನುದಾನವನ್ನು ಬಳಸಿಕೊಂಡು ಕೊಳವೆ ಬಾವಿಗಳನ್ನು ಕೊರೆಯಿಸಿ ಎಂದು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಭರ್ಮಪ್ಪ ಮಾತನಾಡಿ, ಕ್ಷೇತ್ರದ ಹಲವು ಕಡೆ ಈಗಾಗಲೇ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಇನ್ನೂ 78 ಕಡೆ ಕೊಳವೆ ಬಾವಿಗಾಗಿ ಅರ್ಜಿ ಬಂದಿದೆ. ಅವುಗಳನ್ನ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ. ನೀರಿನ ಕೊರತೆ ಆಗದ ಹಾಗೆ ನೋಡಿಕೊಳ್ಳುತ್ತೇವೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲೆಗೆ 1 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ ಕ್ಷೇತ್ರಕ್ಕೆ 14 ಲಕ್ಷ ರೂ. ಲಭ್ಯವಾಗಲಿದೆ ಎಂದರು.
ಗರಂ ಆದ ಎಂಎಲ್ಎ
ಕ್ಷೇತ್ರಕ್ಕೆ 14 ಲಕ್ಷ ರೂ. ಬಿಡುಗಡೆಯಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಶಾಸಕಿ ಶಾರದಾ ಪೂರ್ಯಾನಾಯ್ಕ್ ಗರಂ ಆದರು. 14 ಲಕ್ಷ ರೂ. ಹಣ ಈಗ ಕೊರೆಸಿರುವ ಬೋರ್ವೆಲ್ಗಳಿಗೆ ಕೊಡಲು ಆಗುವುದಿಲ್ಲ. ಬಾಕಿ ಇರುವುದಕ್ಕೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೆ ಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆ ಕರೆದು ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಾಡಿಕೆಗಿಂತಲು ಕಡಿಮೆ ಮಳೆ
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ತಾಲೂಕಿನಲ್ಲಿ ವಾಡಿಕೆಗಿಂತಲೂ ಶೇ.74ರಷ್ಟು ಮಳೆ ಕೊರತೆಯಾಗಿದೆ. ಮಳೆ ಬಂದರೆ ಕೃಷಿ ಚುಟವಟಿಕೆ ಬಿರುಸಲಾಗಿದೆ. ಈ ಹಿನ್ನೆಲೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.
ಕಾಫಿ, ಟೀ ಕುಡಿಯಲು ಸಭೆ ನಡೆಸುತ್ತಿಲ್ಲ
ಆದರ್ಶ ಗ್ರಾಮ, ನಿವೇಶನ ಹಂಚಿಕೆ ಸೇರಿದಂತೆ ಕೆಲವು ಇಲಾಖೆ ಅಧಿಕಾರಿಗಳು ಅಪೂರ್ಣ ಮಾಹಿತಿ ನೀಡಿದರು. ಇದರಿಂದ ಶಾಸಕಿ ಶಾರದಾ ಪೂರ್ಯಾನಾಯ್ಕ್ ಸಿಟ್ಟಾದರು. ಸಾಮಾನ್ಯ ಸಭೆ, ಕೆಡಿಪಿ ಸಭೆಗಳು ಕಾಫಿ, ಟೀ ಕುಡಿದು, ಬಿಸ್ಕೇಟ್ ತಿಂದು ಹೋಗುವುದಕ್ಕಲ್ಲ. ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಬರಬೇಕು ಎಂದು ತರಾಟೆಗೆ ತೆಗೆದಕೊಂಡರು.
ಇದನ್ನೂ ಓದಿ – ಶಿವಮೊಗ್ಗ ಗಾಂಧಿ ಪಾರ್ಕ್ನಲ್ಲಿ ಮಾಜಿ ಸಚಿವರಿಂದ ಉಪವಾಸ ಸತ್ಯಾಗ್ರಹ, ಕಾರಣವೇನು? ಯಾವಾಗ?
ವಿವಿಧ ಇಲಾಖೆ ಅಧಿಕಾರಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮಗಳು, ಯೋಜನೆ ಮತ್ತು ಅವುಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಶಿವಮೊಗ್ಗ ತಾಲೂಕು ಪಂಚಾಯಿತಿ ಇ.ಒ ಅವಿನಾಶ್, ಆಡಳಿತಾಧಿಕಾರಿ ನಂದಿನಿ ಇದ್ದರು.