SHIVAMOGGA LIVE | 20 JULY 2023
SHIMOGA : ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಜಿಲ್ಲೆಯ ಭಾಗಗಲ್ಲಿ ಜೋರು ಮಳೆಯಾಗುತ್ತಿದೆ (Rain). ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ. ಅರೆ ಮಲೆನಾಡು ಭಾಗದಲ್ಲಿ ಸೋನೆ ಸುರಿದು ಕೆಲ ಹೊತ್ತು ಬಿಡುವು ನೀಡುತ್ತಿದೆ. ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳಿಗೆ ಹಾನಿ, ಮರಗಳು ಧರೆಗುರುಳಿರುವ ವರದಿಯಾಗಿದೆ. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ರಾತ್ರಿಯಿಂದಲೆ ಅಬ್ಬರದ ಮಳೆ
ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದೆ. ಹೊಸನಗರದ ನಗರ ಹೋಬಳಿ ಮತ್ತು ತೀರ್ಥಹಳ್ಳಿಯ ಹೊನ್ನೇತಾಳು ಸುತ್ತಮುತ್ತ ಜೋರು ಮಳೆಯಾಗುತ್ತಿರುವ (Rain) ವರದಿಯಾಗಿದೆ. ಉಳಿದಂತೆ ಸಾಗರ, ಭದ್ರಾವತಿ, ಶಿಕಾರಿಪುರದ ವಿವಿಧೆಡ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಸಾಧಾರಣ ಮಳೆ ಸುರಿಯುತ್ತಿದೆ.

ಮತ್ತೆ ಕಳೆಗಟ್ಟಿದ ಮಳೆ
ಜಿಲ್ಲೆಯಾದ್ಯಂತ ಸುಮಾರು 10 ದಿನದ ಬಳಿಕ ಮಳೆ ಕಳೆಗಟ್ಟಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಜೋರಾಗಿ ಮಳೆಯಾಗುತ್ತಿದೆ. ಅರೆ ಮಲೆನಾಡು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕಿನ ವಿವಿಧೆಡೆ ಎಡೆಬಿಡದೆ ಮಳೆಯಾಗುತ್ತಿದೆ. ತೀರ್ಥಹಳ್ಳಿಯ ಆಗುಂಬೆ, ಕಸಬಾ, ಮತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಮನೆಗಳಿಗೆ ಹಾನಿ, ಮರಗಳು ಧರೆಗೆ
ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿದ್ದರೆ, ಮನೆಗಳಿಗು ಹಾನಿಯುಂಟಾಗಿದೆ. ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯೋಗಿಮಳಲಿ ಗ್ರಾಮದಲ್ಲಿ ವೇದಾಕ್ಷಿ ಅವರ ಮನೆ ಮರ ಉರಳಿದೆ. ಇದರಿಂದ ಮನೆಗೆ ಹಾನಿಯಾಗಿದೆ. ಹೊನ್ನೇತಾಳು ಗ್ರಾಮದ ಲಲಿತಾ ಎಂಬುವವರ ಮನೆ ಗೋಡೆ ಕುಸಿದಿದೆ. ಆರಗದಲ್ಲಿ ಯಶೋಧ ಅವರ ಮನೆ, ಕೊಟ್ಟಿಗೆ ಮೇಲೆ ಮರ ಉರುಳಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರ, ಬುಡಮೇಲಾದ ಮರಗಳು, ಕರೆಂಟ್ ಕಟ್, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಮೇಲಿನ ಕುರುವಳ್ಳಿಯ ಸುಲೇಖಾ ಎಂಬುವವರ ಮನೆ ಛಾವಣಿ ಕುಸಿದಿದೆ. ಹುಂಚದಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಕಟ್ಟಡ, ಬಿದರಗೋಡು ಗ್ರಾಮ ಪಂಚಾಯಿತಿ ಹಳೆ ಕಟ್ಟಡದ ಛಾವಣಿಗೆ ಹಾನಿಯಾಗಿದೆ. ನೆಂಟೂರು ಗ್ರಾಮದಲ್ಲಿ ಕಾಲು ಸಂಕ ಉರುಳಿದೆ. ಬೇಗುವಳ್ಳಿಯ ಭೂತರಾಯನ ಸ್ವಾಮಿ ದೇಗುಲದ ಆವರಣದಲ್ಲಿರುವ ತಡೆಗೋಡೆ ಕುಸಿದಿದೆ.

