» ಶಿವಮೊಗ್ಗದ ಇಂದಿರಾ ಕ್ಯಾಂಟೀನ್ನಲ್ಲಿ ಮಿನಿಸ್ಟರ್ ಊಟ » ಹೊಟೇಲ್ನಿಂದ ತಂದ ಊಟ ಬಡಿಸಿದ ಆರೋಪ » ಒಂದು ದಿನದ ಬಳಿಕ ಪಾಲಿಕೆಯಿಂದ ಹೊರಬಂತು ಸ್ಪಷ್ಟನೆಸುದ್ದಿಯ ಹೈಲೈಟ್
![]()
ಶಿವಮೊಗ್ಗ : ನಗರದ ಇಂದಿರಾ ಕ್ಯಾಂಟೀನ್ನಲ್ಲಿ (Indira Canteen) ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಹೊಟೇಲ್ನಿಂದ ತರಿಸಿದ್ದ ಊಟ ಬಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತರು ಸ್ಪಷ್ಟನೆಗೆ ಮುಂದಾಗಿದ್ದಾರೆ.
ಇಂದಿರಾ ಕ್ಯಾಂಟೀನ್ನಲ್ಲಿ ಹೊಟೇಲ್ ಊಟ
ಸಚಿವ ರಹೀಂ ಖಾನ್ ಸೋಮವಾರ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದರು. ಬಿ.ಹೆಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡಿದ್ದರು. ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಭೋವಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರವಿಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಸೇರಿದಂತೆ ಹಲವರು ಇದ್ದರು. ಎಲ್ಲರು ಇಂದಿರಾ ಕ್ಯಾಂಟೀನ್ನಲ್ಲಿಯೇ ಸಚಿವರೊಂದಿಗೆ ಊಟ ಮಾಡಿದ್ದರು. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬಡಿಸಿದ ಊಟ, ಹೊಟೇಲ್ನಿಂದ ತರಿಸಿದ್ದು ಎಂಬ ಆರೋಪ ಕೇಳಿ ಬಂದಿತ್ತು.

ಸಚಿವರಿಗು ಕಾಡಿದ ಅನುಮಾನ
ಸಚಿವರಿಗು ಇದು ಹೊಟೇಲ್ ಊಟ ಎಂಬ ಅನುಮಾನ ಮೂಡಿದೆ. ಮಹಾನಗರ ಪಾಲಿಕೆಯಲ್ಲಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಚಿವ ರಹೀಂ ಖಾನ್, ‘ತಪ್ಪಿತಸ್ಥರಿಗೆ ನೊಟೀಸ್ ಕೊಟ್ಟು ಸಸ್ಪೆಂಡ್ಗೆ ರೆಡಿ ಮಾಡಿದ್ದೀನಿ. ಹೊಟೇಲ್ನಿಂದ ತರಿಸಲಾಗಿದೆ ಎಂದು ಅವರು ಎಲ್ಲಿಯು ಹೇಳಲಿಲ್ಲ. ಇದರಿಂದ ಇಂದಿರಾ ಕ್ಯಾಂಟೀನ್ ಕುರಿತು ತಪ್ಪು ಅಭಿಪ್ರಾಯ ಹೋಗಲಿದೆʼ ಎಂದು ತಿಳಿಸಿದರು.

ಕರೆ ಸ್ವೀಕರಿಸದ ಕಮಿಷನರ್
ಇನ್ನು, ಇಂದಿರಾ ಕ್ಯಾಂಟೀನ್ನಲ್ಲಿ ಸಚಿವರಿಗೆ ಹೊಟೇಲ್ ಊಟ ಬಡಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಕುರಿತು ಮಾಧ್ಯಮ ಪ್ರತಿನಿಧಿಗಳು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರಿಗೆ ಸ್ಪಷ್ಟನೆಗೆ ಕರೆ ಮಾಡಿದ್ದರು. ಆದರೆ ಅವರೆ ಕರೆ ಸ್ವೀಕರಿಸಿರಲಿಲ್ಲ.

ಒಂದು ದಿನದ ಬಳಿಕ ಸ್ಪಷ್ಟನೆ
ಹೊಟೇಲ್ ಊಟದ ವಿವಾದ ದಟ್ಟವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
‘ನ.25ರಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಶಿವಮೊಗ್ಗದ ಇಂದಿರಾ ಕ್ಯಾಂಟೀನ್ ಮತ್ತು ಗಾಡಿಕೊಪ್ಪದಲ್ಲಿರುವ ಮಾಸ್ಟರ್ ಕಿಚನ್ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಮಾಸ್ಟರ್ ಕಿಚನ್ನಿಂದ ಇಂದಿರಾ ಕ್ಯಾಂಟೀನ್ಗಳಿಗೆ ಸರಬರಾಜು ಮಾಡುವ ಆಹಾರ ಹೊಟೇಲ್ ಆಹಾರವೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಸತ್ಯಕ್ಕೆ ದೂರವಾದದ್ದು’
ಕವಿತಾ ಯೋಗಪ್ಪನವರ್, ಪಾಲಿಕೆ ಆಯುಕ್ತೆ (ಪ್ರಕಟಣೆ ಮೂಲಕ ಸ್ಪಷ್ಟನೆ)
ಇಂದಿರಾ ಕ್ಯಾಂಟೀನ್ ಊಟದ ಕುರಿತು ಆಗಾಗ ಆರೋಪಗಳು ಕೇಳಿ ಬರುತ್ತಿದ್ದರು. ಈಚೆಗೆ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುವವರ ಸಂಖ್ಯೆಯು ಇಳಿಮುಖವಾಗಿತ್ತು. ಇದರ ನಡುವೆ ಸಚಿವರಿಗೆ ಹೊಟೇಲ್ ಊಟ ಉಣ ಬಡಿಸಿದ ಆರೋಪ ಇಂದಿರಾ ಕ್ಯಾಂಟೀನ್ನ ಇಮೇಜ್ಗೆ ಮತ್ತಷ್ಟು ಧಕ್ಕೆ ತಂದಿದೆ.
ಇದನ್ನೂ ಓದಿ » ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಕರೆಂಟ್ ಇರಲ್ಲ, ಎಲ್ಲೆಲ್ಲಿ?


Indira Canteen
