ಶಿವಮೊಗ್ಗ : ಮುಸ್ಲಿಂ ಧರ್ಮದಲ್ಲಿ ಹಜ್ ಯಾತ್ರೆ (Haj) ಅತ್ಯಂತ ಪವಿತ್ರವಾದದ್ದು. ಈ ಯಾತ್ರೆಗೆ ತೆರಳುವವರಿಗೆ ಪ್ರತಿ ವರ್ಷ ತರಬೇತಿ ನೀಡಲಾಗುತ್ತಿದೆ. ಇದೆ ಮೊದಲ ಬಾರಿ ನಾಲ್ಕು ಜಿಲ್ಲೆಯ ಯಾತ್ರಾರ್ಥಿಗಳಿಗೆ ಶಿವಮೊಗ್ಗದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಮತ್ತು ಜಿಲ್ಲಾ ಹಜ್ ಸಮಿತಿ ಸಂಯೋಜಕಿ ಬಲ್ಕೀಸ್ ಬಾನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಲ್ಕೀಸ್ ಬಾನು, ಏ.15ರಂದು ಶಿವಮೊಗ್ಗದ ಮದಾರಿಪಾಳ್ಯದ ಹೆವೆನ್ ಪ್ಯಾಲೆಸ್ನಲ್ಲಿ ಒಂದು ದಿನದ ತರಬೇತಿ ಆಯೋಜಿಸಲಾಗಿದೆ ಎಂದರು.
ಇಲ್ಲಿದೆ ಸುದ್ದಿಗೋಷ್ಠಿಯ ಪ್ರಮುಖ ಪಾಯಿಂಟ್ಸ್
ಶಿವಮೊಗ್ಗ ಜಿಲ್ಲೆಯ 188 ಯಾತ್ರಿಗಳು, ಹಾಸನದ 125, ಚಿಕ್ಕಮಗಳೂರಿನ 117, ದಾವಣಗೆರೆಯ 153 ಯಾತ್ರಿಗಳು ಸೇರಿ ಒಟ್ಟು 583 ಯಾತ್ರಾರ್ಥಿಗಳು ಹಜ್ (Haj) ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಅಂದಾಜು ಎರಡೂವರೆ ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಬೆಳಗ್ಗೆ 9 ಗಂಟೆಗೆ ಶಿಬಿರಾರ್ಥಿಗಳ ನೋಂದಣಿ ಆಗಲಿದೆ. ಸಚಿವರಾದ ಮಧು ಬಂಗಾರಪ್ಪ, ರಹೀಮ್ ಖಾನ್, ಜಮೀರ್ ಅಹ್ಮದ್, ಸಂಸದ ರಾಘವೇಂದ್ರ ಮತ್ತು ಜಿಲ್ಲೆಯ ಶಾಸಕರನ್ನು ಆಹ್ವಾನಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ » ಶಿವಮೊಗ್ಗದ ವ್ಯಕ್ತಿಯ ವಾಟ್ಸಪ್ಗೆ ಬಂತು ಟ್ರಾಫಿಕ್ ಚಲನ್, ಕ್ಲಿಕ್ ಮಾಡಿದ ನಂತರ ಕಾದಿತ್ತು ಶಾಕ್, ಆಗಿದ್ದೇನು?
ಹಜ್ ಯಾತ್ರೆ (Haj) ಸಂದರ್ಭ ಯಾವ ಬಟ್ಟೆ ಧರಿಸಬೇಕು, ಧಾರ್ಮಿಕ ಕಾರ್ಯಗಳ ನಿರ್ವಹಣೆ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಸೌದಿ ಅರೇಬಿಯಾದಲ್ಲಿ ಯಾತ್ರಾರ್ಥಿಗಳಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಶಿಬಿರದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಬಿರಾರ್ಥಿಗಳಿಗೆ ಲಸಿಕೆ ಹಾಕಲಾಗುತ್ತದೆ. ಉಳಿದ ಜಿಲ್ಲೆಯವರು ಆಯಾ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ » ಶಿವಮೊಗ್ಗದ ಮಹಿಳೆ ಆಫ್ರಿಕಾದಲ್ಲಿ ಸಾವು, 3 ಲಕ್ಷ ಕಟ್ಟಿದರಷ್ಟೆ ಕೊಡ್ತಾರಂತೆ ಮೃತದೇಹ, ಏನಿದು ಕೇಸ್?

ರಾಜ್ಯದಿಂದ ಏಪ್ರಿಲ್ 29ರಂದು ಮೊದಲ ವಿಮಾನ ಹೊರಡಲಿದೆ. ಒಂದು ತಿಂಗಳು ಪೂರ್ತಿ ಪ್ರತಿ ದಿನ ಹಜ್ ಯಾತ್ರೆಗೆ ವಿಮಾನ ಹಾರಲಿದೆ. ರಾಜ್ಯದಿಂದ 8 ಸಾವಿರ ಮಂದಿ ಯಾತ್ರೆಗೆ ತೆರಳಲಿದ್ದಾರೆ. ಯಾತ್ರೆಗೆ ತೆರಳುವವರು ಸಂಪೂರ್ಣ ಖರ್ಚು, ವೆಚ್ಚವನ್ನು ಅವರೆ ಭರಿಸಬೇಕಾಗುತ್ತದೆ. ಇದಕ್ಕೆ ಸರ್ಕಾರದ ಸಹಾಯಧನ ಇರುವುದಿಲ್ಲ.
– ಬಲ್ಕೀಸ್ ಬಾನು, ವಿಧಾನ ಪರಿಷತ್ ಸದಸ್ಯೆ


ಸುದ್ದಿಗೋಷ್ಠಿಯಲ್ಲಿ ಅಫ್ತಾಬ್ ಪರ್ವೀಜ್, ನಿಹಾಲ್, ನೂರುಲ್ಲಾ, ಆಸೀಫ್, ಮುಯೂಬ್ ಸೇರಿದಂತೆ ಹಲವರು ಇದ್ದರು.

