ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ 8 ಪುಟದ ಚಾರ್ಜ್ಶೀಟ್ (CHARGESHEET) ಅನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ವಿತರಿಸಿದರು. ಈ ಸಂದರ್ಭ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜನರಿಗೆ ಮನವರಿಕೆ ಮಾಡಿದರು.
ಇದೆ ವೇಳೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸಪ್ಪ, ಶೂನ್ಯ ಅಭಿವೃದ್ಧಿ, ದುರಾಡಳಿತದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.

ಎಂಎಲ್ಎ ಏನೆಲ್ಲ ಹೇಳಿದರು?
- ಸಾರ್ವಜನಿಕರಿಂದ ಹಣವನ್ನು ಲೂಟಿ ಮಾಡುವುದು ಹೇಗೆ? ಅವರ ಜೇಬಿಗೆ ಕತ್ತರಿ ಹಾಕುವುದು ಹೇಗೆ? ಜನರಿಗೆ ವಂಚಿಸುವುದು ಹೇಗೆ ಎಂಬುದನ್ನು ಈ ಸರ್ಕಾರ ತಿಳಿಸಿಕೊಟ್ಟಿದೆ. ಇದರ ವಿರುದ್ಧ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ.

- ಬಹುಮತ ಸಿಕ್ಕಿದೆ ಎಂದು ತಮ್ಮಿಷ್ಟದ ಬಿಲ್ ಪಾಸ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸಿದ 18 ಶಾಸಕರನ್ನು ಸಸ್ಪೆಂಡ್ ಮಾಡಿದ್ದಾರೆ.
- ಮಹಿಳೆಯರಿಗೆ 2 ಸಾವಿರ ರೂ. ಕೊಡುವುದಾಗಿ ನಂಬಿಸಿ, ನೀರು, ಹಾಲು, ಪೆಟ್ರೋಲ್, ಡಿಸೇಲ್, ವಿದ್ಯುತ್, ಮೆಟ್ರೋ ರೈಲು, ಸ್ಮಾರ್ಟ್ ಮೀಟರ್ ಸೇರಿ ಎಲ್ಲದರ ದರವನ್ನು ಶೇ.3ರಿಂದ ಶೇ.900ರಷ್ಟು ಹೆಚ್ಚಳ ಮಾಡಲಾಗಿದೆ. ಇತ್ತ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಹಣ ನೀಡಲು ಸತಾಯಿಸಲಾಗುತ್ತಿದೆ.

- ಗುತ್ತಿಗೆದಾರರು ಈ ಸರ್ಕಾರವನ್ನು 60 ಪರ್ಸೆಂಟ್ ಸರ್ಕಾರ ಎಂದು ದಾಖಲೆ ಸಹಿತ ತಿಳಿಸಿದ್ದಾರೆ. ಅಬಕಾರಿ ಸಚಿವರಿಗೆ ವಾರ್ಷಿಕ 500 ಕೋಟಿ ರೂ. ಲಂಚದ ಆಡಿಯೋ ಹೊರ ಬಿದ್ದಿದೆ. ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಸ್ಮಾರ್ಟ್ ಮೀಟರ್ ಹಗರಣ ಸೇರಿದಂತೆ ನಾನಾ ಹಗರಣಗಳು ನಡೆದಿವೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಜ್ಯೋತಿಪ್ರಕಾಶ್, ಶಿವರಾಜ್, ಮಾಲ್ತೇಶ್, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ » ಸಿಗಂದೂರು ಸೇತುವೆ, ತಲೆ ಮೇಲೆ ಕ್ಲಾಂಪ್ ಬಿದ್ದು ಕಾರ್ಮಿಕ ಸಾವು, ಸಂಸದ ರಾಘವೇಂದ್ರ ವಿಷಾದ
