SHIMOGA NEWS, 15 SEPTEMBER 2024 : ಈ ರಸ್ತೆಯಲ್ಲಿ ಓಡಾಡುವ ಬಹುತೇಕರು ಶಿವಮೊಗ್ಗಕ್ಕೆ ಮತ್ತೆ ಪ್ರಧಾನ ಮಂತ್ರಿ ಬರಲಿ, ಮುಖ್ಯಮಂತ್ರಿ ಭೇಟಿ ನೀಡಲಿ ಎಂದು ಹಂಬಲಿಸುತ್ತಿದ್ದಾರೆ. ಈ ರಸ್ತೆಯಲ್ಲಿರುವ ಗುಂಡಿಗಳೇ (Pot Hole) ಇಂತಹ ತವಕಕ್ಕೆ ಕಾರಣ.
ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವವರನ್ನು ಶಿವಮೊಗ್ಗ ನಗರದೊಳಗೆ ಕರೆತಂದು ಬಿಡುವುದೇ ಬಿ.ಹೆಚ್.ರಸ್ತೆ. ಆದರೆ ಈ ರಸ್ತೆಯಲ್ಲಿ ಭಾರಿ ಗುಂಡಿಗಳು ಪ್ರತ್ಯಕ್ಷವಾಗಿವೆ. ಒಂದಕ್ಕಿಂತಲು ಒಂದು ಅಪಾಯಕಾರಿಯಾಗಿವೆ.
ಎಲ್ಲೆಲ್ಲಿ ಹೇಗಿವೆ ಗುಂಡಿಗಳು?
» ಎಂ.ಆರ್.ಎಸ್ ವೃತ್ತದಲ್ಲಿ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ತಿರುವಿನಲ್ಲೇ ಗುಂಡಿಗಳು ಬಾಯ್ತೆರೆದಿವೆ. ಇದು ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟು ಮಾಡಿವೆ.
» ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ರಸ್ತೆಯ ಎರಡು ಬದಿಯಲ್ಲೂ ಗುಂಡಿಗಳಾಗಿವೆ. ವಾಹನದ ವೇಗ ಹೆಚ್ಚಿದ್ದರೆ ಈ ಗುಂಡಿಗಳ ಬಳಿ ನಿಯಂತ್ರಣ ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಇಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ ಅನ್ನುತ್ತಾರೆ ಸ್ಥಳೀಯರು.
» ವಿದ್ಯಾನಗರದ ಭಾಗದಲ್ಲಿಯು ಬಿ.ಹೆಚ್.ರಸ್ತೆಯಲ್ಲಿ ಗುಂಡಿಗಳಾಗಿವೆ. ಜನಸಂದಣಿ ಮತ್ತು ವಾಹನ ದಟ್ಟಣೆಯು ಇಲ್ಲಿ ಹೆಚ್ಚು. ಇಂತಹ ರಸ್ತೆಯಲ್ಲಿ ಗುಂಡಿಯಾಗಿ ಜನ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
» ಮಹಾದೇವಿ ಟಾಕೀಸ್ ಬಳಿ ನೂತನ ಪೆಟ್ರೋಲ್ ಬಂಕ್ನ ಮುಂಭಾಗ ಭಾರಿ ಗಾತ್ರದ ಗುಂಡಿಯಾಗಿದೆ. ಅಪಾಯ ತಪ್ಪಿಸಲು ಸ್ಥಳೀಯರೆ ಆಗಾಗ ಈ ಗುಂಡಿಗೆ ಮಣ್ಣು ಹಾಕಿ, ಕಲ್ಲು ಹಾಕಿ ಸಮತಟ್ಟುಗೊಳಿಸುತ್ತಿದ್ದಾರೆ.
» ಎಂ.ಆರ್.ಎಸ್ ಸರ್ಕಲ್ನಿಂದ ತುಂಗಾ ಸೇತುವೆವರೆಗೆ ಹಲವು ಕಡೆ ಹತ್ತಾರು ಬೃಹತ್ ಗುಂಡಿಗಳಾಗಿವೆ. ನಿತ್ಯ ಇದೇ ರಸ್ತೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಓಡಾಡುತ್ತಾರೆ. ಆದರೆ ಗುಂಡಿ ಮುಚ್ಚಿಸುವ ಪ್ರಯತ್ನವಾಗದಿರುವುದು ವಿಪರ್ಯಾಸ.
ಸಿಎಂ, ಪಿಎಂ ಬರಲಿ
ಬಿ.ಹೆಚ್.ರಸ್ತೆ, ಎಂ.ಆರ್.ಎಸ್ ಸರ್ಕಲ್ನಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚು. ಇದೇ ಕಾರಣಕ್ಕೆ ಆಗಾಗ ಇಲ್ಲಿ ರಸ್ತೆಯಲ್ಲಿ ಗುಂಡಿಗಳಾಗುತ್ತವೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾಗ ಇಲ್ಲಿದ್ದ ಬೃಹತ್ ಗುಂಡಿಗಳನ್ನು ಮುಚ್ಚಿದ್ದರು. ಈ ಹಿಂದೆ ಮುಖ್ಯಮಂತ್ರಿ ಭೇಟಿ ವೇಳೆ ಗುಂಡಿಗಳನ್ನು ಬಂದ್ ಮಾಡಲಾಗಿತ್ತು. ಈಗ ಪುನಃ ಗಜಗಾತ್ರದ ಗುಂಡಿಗಳಾಗಿದ್ದು, ಮತ್ತೆ ಗಣ್ಯರು ಶಿವಮೊಗ್ಗಕ್ಕೆ ಬರಲಿ ಎಂದು ಜನರು ಹಂಬಲಿಸುತ್ತಿದ್ದಾರೆ.
ಇದನ್ನೂ ಓದಿ » ಬೈಕ್ ಓಡಿಸಿದ್ದು ಮಗ, ಭಾರಿ ದಂಡ ಕಟ್ಟಬೇಕಾಯ್ತು ಅಪ್ಪ, ಏನಿದು ಕೇಸ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200