ಶಿವಮೊಗ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಸಿಇಓಗಳಿಗೆ ವರ್ಗಾಯಿಸಿರುವ ನಿರ್ಧಾರವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಪಿಯು ಕಾಲೇಜುಗಳ ಉಪನ್ಯಾಸಕರ (lecturers) ಸಂಘದ ರಾಜ್ಯ ಅಧ್ಯಕ್ಷ ಎ.ಎಚ್. ನಿಂಗೇಗೌಡ ಒತ್ತಾಯಿಸಿದ್ದಾರೆ.
ನಗರದ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ನಿಯಂತ್ರಣ ವರ್ಗಾವಣೆ ವಾಪಸ್: ಡಿಡಿಪಿಯು ಕಚೇರಿಗಳ ಮೇಲಿನ ಜಿ.ಪಂ. ನಿಯಂತ್ರಣವನ್ನು ರದ್ದುಗೊಳಿಸಬೇಕು.
ಪರೀಕ್ಷಾ ವಿಭಾಗ: ಪರೀಕ್ಷಾ ವಿಭಾಗವನ್ನು ಮರಳಿ ನಿರ್ದೇಶನಾಲಯಕ್ಕೆ ವರ್ಗಾಯಿಸಬೇಕು.
ಅನುಪಾತ ಮರುನಿಗದಿ: ಎನ್ಸಿಇಆರ್ಟಿ ಮಾರ್ಗಸೂಚಿಯಂತೆ ವಿದ್ಯಾರ್ಥಿ-ಉಪನ್ಯಾಸಕರ ಅನುಪಾತವನ್ನು ಸರಿಪಡಿಸಬೇಕು.
ಭತ್ಯೆ ಪರಿಷ್ಕರಣೆ: ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪಾವತಿಸಬೇಕು.
ಅನುದಾನಿತ ಕಾಲೇಜುಗಳ ರಕ್ಷಣೆ: ಕಾರ್ಯಭಾರ ಕೊರತೆಯಿರುವ ಅನುದಾನಿತ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸದೆ, ಸರ್ಕಾರಿ ಕಾಲೇಜುಗಳಲ್ಲಿ ಅವಕಾಶ ನೀಡಬೇಕು.

ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ
ಒಂದು ವೇಳೆ ಸರ್ಕಾರ ಈ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ, 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ರಾಜ್ಯಾದ್ಯಂತ ಬಹಿಷ್ಕರಿಸಲಾಗುತ್ತದೆ. ಅಲ್ಲದೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದನ್ನೂ ಓದಿ – ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?
ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಎಸ್. ಯೋಗೀಶ್, ಗೌರವಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ದಿನಕರ್ ಸೇರಿದಂತೆ ಸಂಘದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.


About The Editor
ನಿತಿನ್ ಆರ್.ಕೈದೊಟ್ಲು






