ಶಿವಮೊಗ್ಗ: ಬಸವೋತ್ಸವದ ಅಂಗವಾಗಿ ಇದೇ ಮೊದಲ ಬಾರಿ ಸಾವಿರ ಜನರಿಂದ ವಚನ (Vachana) ಪಠಿಸುವ ಸಾವಿರದ ವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಮೇ 9ರಂದು ಸಂಜೆ 5.30ರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಆಚರಣಾ ಸಮಿತಿ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಇದೇ ಮೊದಲು ಸಾವಿರಕ್ಕು ಹೆಚ್ಚು ಜನರು ವಚನ (Vachana) ಪಠಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಹೈಲೈಟ್ ಪಾಯಿಂಟ್ಸ್
- ಅಲ್ಲಮಪ್ರಭು ಮೈದಾನದಲ್ಲಿ 260 ಅಡಿ ಅಗಲ, 7 ಮೆಟ್ಟಿಲುಗಳ ಬೃಹತ್ ವೇದಿಕೆಯಲ್ಲಿ ಸಾವಿರದ ವಚನ ಕಾರ್ಯಕ್ರಮ ನಡೆಯಲಿದೆ.
- ವಚನ ಪಠಿಸಲು 1300ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದವರು ನೋಂದಾಯಿಸಿಕೊಂಡಿದ್ದಾರೆ.
- ನೋಂದಣಿ ಮಾಡಿಕೊಂಡವರಿಗೆ ವಚನ ಪಠಿಸುವ ತರಬೇತಿ ನೀಡಲಾಗುತ್ತಿದೆ. ಮೈಸೂರಿನ ಜನಾರ್ದನ್, ಕೆ.ಯುವರಾಜ್, ಸುದರ್ಶನ್, ಸುಧೀರ್, ಗುರುಗುಹ ನಾಗರಾಜ್, ಪಂಡಿತ್ ಹುಮಾಯೂನ್ ಹರ್ಲಾಪುರ, ಜಯಶ್ರೀ ಶ್ರೀಧರ್, ನಾಗರತ್ನ ಟಿ.ಜೆ, ಪ್ರಹ್ಲಾದ್ ದೀಕ್ಷಿತ್, ಸುರೇಖಾ ಹೆಗ್ಡೆ, ಮಹೇಂದ್ರ ಗೋರೆ, ವಿನಯ್ ಯಜ್ಞನಾರಾಯಣ, ಉಮಾ ದಿಲೀಪ್ ಸೇರಿ ಹಲವರು ತರಬೇತಿ ನೀಡುತ್ತಿದ್ದಾರೆ.
- ಸಾವಿರಾರು ಮಂದಿ ಸಮೂಹಿಕವಾಗಿ 38 ವಚನಗಳನ್ನು ಹೇಳಲಿದ್ದಾರೆ. ಪ್ರತಿ ವಚನದ ಬಳಿಕ ಅದರ ಅರ್ಥ ತಿಳಿಸಲಾಗುತ್ತದೆ.
- ಕಾರ್ಯಕ್ರಮದಲ್ಲಿ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಎರಡು ಗಂಟೆಯ ಕಾರ್ಯಕ್ರಮ ಇರಲಿದೆ. ಬಳಿಕ ಪ್ರಸಾದದ ವ್ಯವಸ್ಥೆ ಇದೆ.
ಇದನ್ನೂ ಓದಿ » ಶಿವಮೊಗ್ಗದ ವಿವಿಧ ಠಾಣೆ ಇನ್ಸ್ಪೆಕ್ಟರ್ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?
ಸುದ್ದಿಗೋಷ್ಠಿಯಲ್ಲಿ ಯಾರೆಲ್ಲ ಏನೆಲ್ಲ ಹೇಳಿದರು?
ವಚನಕ್ಕಾಗಿ ಮೀಸಲಾದ ಅಪರೂಪದ ಕಾರ್ಯಕ್ರಮ ಇದು. ವಚನ ಸಾಹಿತ್ಯವನ್ನು ಎಲ್ಲರಿಗು ತಲುಪಿಸಬೇಕಾದ್ದು ಇವತ್ತಿನ ಅಗತ್ಯ. ಇದು ಕಾಲದ ಕರೆ. ಇದಕ್ಕೆ ಸ್ಪಂದಿಸುವ ಕರ್ತವ್ಯದ ಭಾಗವಾಗಿ ಬಸವೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೆಚ್ಚು ಜನರು ವಚನ ಪಠಿಸಬೇಕಿದೆ. ಹೆಚ್ಚು ಜನರಿಗೆ ವಚನ ತಲುಪಿಸಬೇಕಿದೆ. ಈ ಉದ್ದೇಶಕ್ಕಾಗಿ ಸಾವಿರದ ವಚನ ಕಾರ್ಯಕ್ರಮ ನಡೆಸಲಾಗುತ್ತಿದೆ.
– ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮುರುಘಾಮಠ
ಅಂತರ್ಜಾಲದ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಹೊರ ಜಿಲ್ಲೆ, ಹೊರ ರಾಜ್ಯದ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಆನ್ಲೈನ್ ಮೂಲಕವೆ ತರಬೇತಿ ನೀಡಲಾಗುತ್ತಿದೆ. ಚೆನ್ನೈನಿಂದ ಒಬ್ಬರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಮತ್ತೊಬ್ಬರು ಸಿಂಗಾಪುರ ಪ್ರವಾಸ ಮೊಟಕುಗೊಳಿಸಿ ಬರುತ್ತಿದ್ದಾರೆ. ಎಲ್ಲ ಜಾತಿ, ವರ್ಗದ ಜನರಿದ್ದಾರೆ. ಪೌರ ಕಾರ್ಮಿಕರು, ವೈದ್ಯರು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಎಲ್ಲ ವರ್ಗದವರು ಇದ್ದಾರೆ. ಇಂತಹ ಕಾರ್ಯಕ್ರಮ ಇದೆ ಮೊದಲು.
– ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಬಸವ ಕೇಂದ್ರ
ಶಿವಮೊಗ್ಗ ಜಿಲ್ಲೆ ಶರಣರ ನಾಡು. ನೂರಕ್ಕು ಹೆಚ್ಚು ಶರಣರು ಇಲ್ಲಿದ್ದರು. ಬಸವಣ್ಣನವರ ಸಮ ಸಮಾಜದ ಕುರಿತು ಇಲ್ಲಿ ಚರ್ಚೆ ಆಗುತ್ತಿದೆ. ಇದರ ಭಾಗವಾಗಿ ಸಾವಿರದ ವಚನ ಕಾರ್ಯಕ್ರಮ. ಈಗಾಗಲೆ 1300 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ.
– ಎಸ್.ರುದ್ರೇಗೌಡ, ಬಸವ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ
ಕಾರ್ಯಕ್ರಮದ ವೇದಿಕೆ ಸಿದ್ಧವಾಗುತ್ತಿದೆ. ನಾಳೆಯಿಂದ ಎರಡು ದಿನ ಟ್ರಯಲ್ ಮಾಡಲಾಗುತ್ತದೆ. ವಚನ ಪಠಿಸುವವರೆಲ್ಲರು ಅಲ್ಲಮಪ್ರಭು ಮೈದಾನದಲ್ಲಿ ಸೇರಲಿದ್ದಾರೆ.
– ಹೆಚ್.ಸಿ.ಯೋಗೇಶ್, ಸಮಿತಿ ಖಜಾಂಚಿ
ಸಮಿತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಖಜಾಂಚಿ ಡಾ. ಧನಂಜಯ ಸರ್ಜಿ, ಶಂಕರಪ್ಪ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ » ಧಗಧಗ ಹೊತ್ತು ಉರಿದ ವಿದ್ಯುತ್ ಕಂಬದಲ್ಲಿದ್ದ ಕೇಬಲ್, ಸ್ಥಳೀಯರಲ್ಲಿ ಆತಂಕ

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200