ಶಿವಮೊಗ್ಗ : ಕಾಶ್ಮೀರದಲ್ಲಿ ಪಹಾಲ್ಗಾಮ್ನಲ್ಲಿ ಉಗ್ರರ ದಾಳಿಗೆ ಸಾವನ್ನಪಿದ ರಿಯಲ್ ಎಸ್ಟೇಟ್ ಉದ್ಯಮಿ (Businessman) ಮಂಜುನಾಥ್ ರಾವ್ ಅವರ ಮೃತದೇಹ ಇಂದು ರಾತ್ರಿಯೆ ಶಿವಮೊಗ್ಗಕ್ಕೆ ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ಮಂಜುನಾಥ ರಾವ್ ಮನೆಗೆ ಬೆಳಗ್ಗೆಯಿಂದಲೇ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದ ಉದ್ಯಮಿಯ ಮೃತದೇಹದ ಮುಂದೆ ಕಣೀರಾದ ಪತ್ನಿ, ಧೈರ್ಯ ತುಂಬಿದ ಮಿನಿಸ್ಟರ್
ವಿಜಯನಗರದ 3ನೇ ಅಡ್ಡರಸ್ತೆಯಲ್ಲಿ ಮಂಜುನಾಥ್ ಅವರ ಮನೆ ಇದೆ. ಗಣ್ಯರು, ಸಾರ್ವಜನಿಕರ ಭೇಟಿ ಹೆಚ್ಚಾದ ಹಿನ್ನೆಲೆ ನೇತಾಜಿ ವೃತ್ತದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿದೆ. ಇನ್ನು, ಮನೆಗೆ ಹೋಗುವ ರಸ್ತೆಯ ಸುತ್ತಮುತ್ತಲು ಕೂಡ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಅಲ್ಲದೆ ಪೊಲೀಸ್ ಬಂದೊಬಸ್ತ್ ಕೂಡ ನಿಯೋಜನೆ ಮಾಡಲಾಗಿದೆ.
ಜಿಲ್ಲಾಡಳಿತದಿಂದ ಕುಟುಂಬಕ್ಕೆ ಸಾಂತ್ವನ
ಮಂಜುನಾಥ ರಾವ್ ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಸಾಂತ್ವನ ಹೇಳಲಾಯಿತು. ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಂಜುನಾಥ್ ಮನೆಗೆ ಭೇಟಿ ನೀಡಿದರು. ಮಂಜುನಾಥ ರಾವ್ ಅವರ ತಾಯಿ ಸುಮಿತ್ರಾ ಅವರಿಗೆ ಸಾಂತ್ವನ ಹೇಳಿದರು.

ಮಿನಿಸ್ಟರ್, ಮಾಜಿ ಮಿನಿಸ್ಟರ್ಗಳು ಭೇಟಿ
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು ಸೇರಿದಂತೆ ಹಲವು ಪ್ರಮುಖರು ಮಂಜುನಾಥ ರಾವ್ ಅವರ ಮನೆಗೆ ಭೇಟಿ ನೀಡಿದ್ದರು. ಕುಟುಂಬದವರ ಜೊತೆಗೆ ಚರ್ಚೆ ನಡೆಸಿದರು. ಅಲ್ಲದೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರ ಜೊತೆ ನಾವು ನಿಲ್ಲಬೇಕು. ಇಂದು ಸಂಜೆ ಆರು ಗಂಟೆಗೆ ಕಾಶ್ಮೀರದಿಂದ ಮೃತದೇಹ ಹೊರಡುತ್ತದೆ. ಸಚಿವ ಸಂತೋಷ್ ಲಾಡ್, ಮುಖ್ಯ ಕಾರ್ಯದರ್ಶಿ ಅವರ ಜೊತೆಗೆ ಮಾತನಾಡಿದ್ದೇನೆ. ಎಲ್ಲರನ್ನು ಸುರಕ್ಷಿತವಾಗಿ ಕರೆತರುವುದಾಗಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಈ ರೀತಿ ಘಟನೆಯಾಗದಂತೆ ಎಲ್ಲಾರೂ ಒಟ್ಟಾಗಿ ನೋಡಿಕೊಳ್ಳಬೇಕು. ಈ ಸಂದರ್ಭ ಕೇಂದ್ರ ಸರ್ಕಾರದ ಜೊತೆ ಎಲ್ಲರು ನಿಲ್ಲಬೇಕು. ಪಲ್ಲವಿ ಈ ಹಿಂದೆ ತೀರ್ಥಹಳ್ಳಿಯಲ್ಲು ಕೆಲಸ ಮಾಡಿದ್ದರು. ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಅ ದೇವರು ನೀಡಲಿ.
ಕಿಮ್ಮನೆ ರತ್ನಾಕರ್, ಮಾಜಿ ಸಚಿವ

ಕೇಂದ್ರದ ವಿರುದ್ಧ ಬೇಳೂರು ಗರಂ
ಪಹಾಲ್ಗಾಮ್ ದಾಳಿ ಕುರಿತು ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ರಾಜ್ಯದ ಮೂವರು ಮೃತಪಟ್ಟಿದ್ದಾರೆ. ಪ್ರತಿಬಾರಿ ದಾಳಿಯಾದಾಗ ನಾವು ಅವರನ್ನು ಬಿಡೋದಿಲ್ಲ ಎಂದು ಕೇಂದ್ರದ ನಾಯಕರು ಹೇಳುತ್ತಿದ್ದಾರೆ. ಪುಲ್ವಮಾ ದಾಳಿ ಸಂದರ್ಭ ಇದನ್ನೇ ಹೇಳಿದ್ದರು. ಸುರಕ್ಷತೆ ಇಲ್ಲದೆ ಇರುವ ಸ್ಥಳಕ್ಕೆ ಪ್ರವಾಸಿಗರನ್ನು ಬಿಡುವ ಕೆಲಸ ಮಾಡಿದ್ದೇಕೆ? ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದೇನಾ ಬುಡ ಸಮೇತಾ ಕಿತ್ತು ಹಾಕಿರುವುದು. ಮಂಜುನಾಥ ಅವರ ತಾಯಿ ಕೂಡ ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.
ಜಮ್ಮು ಕಾಶ್ಮೀರ ಸರ್ಕಾರಕ್ಕೆ ಯಾವುದೇ ಅಧಿಕಾರ ನೀಡಿಲ್ಲ. ಎಲ್ಲವೂ ಕೇಂದ್ರ ಸರ್ಕಾರವೇ ನಿಯಂತ್ರಿಸುತ್ತಿದೆ. ಹಾಗಿದ್ದೂ ಭಯೋತ್ಪಾದಕರ ದಾಳಿ ನಡೆಸುವ ಸ್ಥಳಗಳಿಗೆ ಪ್ರವಾಸಿಗರನ್ನು ಏಕೆ ಬಿಡುತ್ತಾರೆ.
ಬೇಳೂರು ಗೋಪಾಲಕೃಷ್ಣ, ಶಾಸಕ

ಆರ್ಎಸ್ಎಸ್ ಮುಖಂಡರು ಭೇಟಿ
ಆರ್ಎಸ್ಎಸ್ ಮುಖಂಡ ಪಟ್ಟಾಭಿರಾಮ್ ಅವರ ನೇತೃತ್ವದಲ್ಲಿ ಆರ್ಎಸ್ಎಸ್ ಮುಖಂಡರು ಮಂಜುನಾಥ ರಾವ್ ಮನೆಗೆ ಭೇಟಿ ನೀಡಿದರು. ಕುಟುಂಬದವರ ಜೊತೆಗೆ ಚರ್ಚಿಸಿದರು.
ಕಳೆದ 3 ಅವಧಿಯಲ್ಲಿ ಎಲ್ಲವೂ ನಿಯಂತ್ರಣಕ್ಕೆ ಬಂದಿತ್ತು. ದೇಶದಲ್ಲಿ ಮತ್ತೆ ಭಯದ ವಾತಾವರಣ ನಿರ್ಮಿಸಲು ಸಂಚು ರೂಪಿಸಿದ್ದಾರೆ. ಕಾಶ್ಮೀರದ ಪರಿಸ್ಥಿತಿ ನಾವು ಅಂದುಕೊಂಡಂತೆ ತಿಳಿಯಾಗಿಲ್ಲ. ವಕ್ಫ್ ಕಾಯ್ದೆ, ರಾಣಾನನ್ನು ಭಾರತಕ್ಕೆ ಕರೆತಂದಿದ್ದು, ಪಶ್ಚಿಮ ಬಂಗಾಳದ ಪರಿಸ್ಥಿತಿ ಎಲ್ಲವೂ ಇದಕ್ಕೆ ಕಾರಣ ಇರಬಹುದು.
ಪಟ್ಟಾಭಿರಾಮ್, ಆರ್ಎಸ್ಎಸ್ ಮುಖಂಡ
ಐಜಿಪಿ ಭೇಟಿ, ಕುಟುಂಬದ ಜೊತೆ ಚರ್ಚೆ
ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ಮಂಜುನಾಥ ರಾವ್ ಅವರ ಮನೆಗೆ ಭೇಟಿ ನೀಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರೊಂದಿಗೆ ಮನೆಗೆ ಭೇಟಿ ಕುಟುಂಬದವರ ಜೊತೆಗೆ ಚರ್ಚೆ ನಡೆಸಿದರು. ಆದರೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ರವಿಕಾಂತೇಗೌಡ ನಿರಾಕರಿಸಿದರು.

ತಡರಾತ್ರಿ ಮೃತದೇಹ ಶಿವಮೊಗ್ಗಕ್ಕೆ
ಮಂಜುನಾಥ್ ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ತರುವ ಕುರಿತು ಈ ಹಿಂದೆ ನಿಗದಿಯಾಗಿದ್ದ ಪ್ಲಾನ್ ಬದಲಾಗುವ ಸಾಧ್ಯತೆ ಇದೆ. ಕಾಶ್ಮೀರದಿಂದ ದೆಹಲಿ, ಮುಂಬೈ ಮಾರ್ಗವಾಗಿ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಇಂದು ಮಧ್ಯರಾತ್ರಿ ರಸ್ತೆ ಮೂಲಕ ಶಿವಮೊಗ್ಗಕ್ಕೆ ಮೃತದೇಹ ತರುವ ಸಾಧ್ಯತೆ ಇದೆ.


ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200