SHIVAMOGGA LIVE | 29 JULY 2023
SHIMOGA : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (DCC BANK) ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಜಯವಾಗಿದೆ. ಈವರೆಗೂ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದಾರೆ.
DCC BANK ಸಭಾಂಗಣದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಯಿತು. ಅವಿಶ್ವಾಸದ ಪರವಾಗಿ 9 ಮತಗಳು, ವಿರುದ್ಧವಾಗಿ 3 ಮತ ಚಲಾವಣೆಯಾದವು. ಹಾಗಾಗಿ, ಎರಡೂವರೆ ವರ್ಷ ಅಧ್ಯಕ್ಷರಾಗಿದ್ದ ಚನ್ನವೀರಪ್ಪ ತಮ್ಮ ಸ್ಥಾನ ತ್ಯಜಿಸಬೇಕಾಯಿತು.
ಷಡಾಕ್ಷರಿಗೆ ಪ್ರಭಾರ ಜವಾಬ್ದಾರಿ
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಹೆಚ್.ಎಲ್.ಷಡಾಕ್ಷರಿ ಅವರಿಗೆ ಪ್ರಭಾರ ಅಧ್ಯಕ್ಷ ಜವಾಬ್ದಾರಿ ವಹಿಸಲಾಗಿದೆ. ಷಡಾಕ್ಷರಿ ಅವರು 2021ರ ಫೆ.8ರಂದು ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು 2011 ರಿಂದ 2014ರವರೆಗೆ ಅವರು ಉಪಾಧ್ಯಕ್ಷರಾಗಿದ್ದರು.
ಇದನ್ನೂ ಓದಿ – GOOD NEWS | ಬೆಂಗಳೂರು – ಶಿವಮೊಗ್ಗ ವಿಮಾನದ ಟಿಕೆಟ್ ರೇಟ್ ಇಳಿಕೆ, ಈವರೆಗೂ ಎಷ್ಟಾಗಿದೆ ಬುಕಿಂಗ್?
ಯಾರೆಲ್ಲ ಯಾರಿಗೆ ಮತ ಚಲಾಯಿಸಿದರು
ಅಧ್ಯಕ್ಷ ಚನ್ನವೀರಪ್ಪ ಅವರ ವಿರುದ್ಧ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವಿಶ್ವಾಸ ಮಂಡಿಸಿದ್ದರು. ಅದರಂತೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಹೆಚ್.ಎಲ್.ಷಡಾಕ್ಷರಿ, ವಿಜಯದೇವ್, ದುಗ್ಗಪ್ಪಗೌಡ, ಹೆಚ್.ಕೆ.ವೆಂಕಟೇಶ್, ಎಸ್.ಪಿ.ದಿನೇಶ್, ಎಂ.ಎಂ.ಪರಮೇಶ್, ಜೆಡಿಎಸ್ ಬೆಂಬಲಿತ ನಿರ್ದೇಶಕ ಜೆ.ಪಿ.ಯೋಗೇಶ್, ಬಿಜೆಪಿ ಬೆಂಬಲಿತ ನಿರ್ದೇಶಕ ಶ್ರೀಪಾದರಾವ್ ಮತ ಚಲಾಯಿಸಿದರು. ಅಧ್ಯಕ್ಷ ಚನ್ನವೀರಪ್ಪ ಪರವಾಗಿ ಎಂ.ಬಿ.ಚನ್ನವೀರಪ್ಪ, ಅಗಡಿ ಅಶೋಕ್, ಬಿ.ಡಿ.ಭೂಕಾಂತ ಅವರು ಮತ ಚಲಾಯಿಸಿದ್ದರು.
ಬ್ಯಾಂಕ್ ಬಳಿ ಬಿಗಿ ಬಂದೋಬಸ್ತ್
ಅವಿಶ್ವಾಸದ ಹಿನ್ನೆಲೆ ಬಾಲರಾಜ ಅರಸ್ ರಸ್ತೆಯಲ್ಲಿರುವ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕಚೇರಿಯ ಗೇಟ್ನಲ್ಲಿ ಪೊಲೀಸರು ನಿಯೋಜಿಸಿ, ಬ್ಯಾರಿಕೇಡ್ ಹಾಕಲಾಗಿತ್ತು. ಆವರಣ ಪ್ರವೇಶಿಸುವ ಪ್ರತಿ ವಾಹನವನ್ನು ಪೊಲೀಸರು ಪರಿಶೀಲಿಸುತ್ತಿದ್ದರು. ಅಗತ್ಯವಿಲ್ಲದವರನ್ನು ಗೇಟ್ ಒಳಗೆ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗ ಜನಶತಾಬ್ದಿ ಸೇರಿ ವಿವಿಧ ರೈಲುಗಳು ಆ.1ರಂದು ತಡವಾಗಿ ಸಂಚರಿಸಲಿವೆ, ಇಲ್ಲಿದೆ ಕಾರಣ
ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್, ಇನ್ಸ್ಪೆಕ್ಟರ್ ಹರೀಶ್ ಪಟೇಲ್, ಇನ್ಸ್ಪೆಕ್ಟರ್ ರವಿ ಅವರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.