SHIVAMOGGA LIVE | 16 JULY 2023
THIRTHAHALLI : ಆಗುಂಬೆ ಘಾಟಿಯಲ್ಲಿ (Agumbe Ghat) ಸುಮಾರು 20 ಅಡಿ ಕಂದಕಕ್ಕೆ ಬಿದ್ದ ವ್ಯಕ್ತಿಯೊಬ್ಬರನ್ನು ಆಗುಂಬೆಯ ಯುವಕರು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿರುವ ಆತನನ್ನು ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹೇಗಾಯ್ತು ಘಟನೆ?
ಶಿವಮೊಗ್ಗದ ಮೊಹಮ್ಮದ್ ಬಾಷಾ ಎಂಬುವವರು ಟೋಯಿಂಗ್ ವಾಹನದಲ್ಲಿ ಟ್ರ್ಯಾಕ್ಟರನ್ನು ಟೋಯಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಘಾಟಿ ಹತ್ತಲಾಗದೆ ನಿಂತಿದೆ. ವಾಹನದಿಂದ ಕೆಳಗಿಳಿದ ಮೊಹಮ್ಮದ್ ಬಾಷಾ, ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಬಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ (Agumbe Ghat) ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ರಕ್ಷಣೆಗೆ ಧಾವಿಸಿದ ಆಗುಂಬೆ ಯುವಕರು
ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಮೊಹಮ್ಮದ್ ಬಾಷಾ ಅವರ ರಕ್ಷಣೆಗೆ ಧಾವಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್ಶೀಟ್, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್ ಬಾಷಾ ಅವರನ್ನು ರಕ್ಷಿಸಿ ಮೇಲತ್ತಿದ್ದಾರೆ. ಅವರಿಗೆ ಸೊಂಟ ಮತ್ತು ತಲೆಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿದೆ ರಕ್ಷಣಾ ಕಾರ್ಯಾಚರಣೆಯ ವಿಡಿಯೋ
ಆಪದ್ಭಾಂದವರಾದ ಸ್ಥಳೀಯ ಯುವಕರು
ನಿತ್ಯಾನಂದ ಆಗುಂಬೆ ಅವರ ನೇತೃತ್ವದಲ್ಲಿ ಸ್ಥಳೀಯರಾದ ಸಚಿನ್, ಅಶ್ವಥ್, ಕಿರಣ್, ಅಭಿ, ಶ್ರೀಕಾಂತ್, ಅಣ್ಣು ಪೂಜಾರಿ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಗುಂಬೆ ಯುವಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ – ಹೈವೇಯಲ್ಲಿ ಅಪಘಾತ, ಕಾರಿನ ಹಿಂಬದಿ ಸೀಟ್ನಲ್ಲಿದ್ದ ಡ್ರಮ್ ಕಂಡು ಜನಕ್ಕೆ ಶಾಕ್ – ಮತ್ತಷ್ಟು ಸುದ್ದಿ ಇಲ್ಲಿದೆ
ಅತ್ಯಂತ ಡೇಂಜರಸ್ ತಿರುವು
ಆಗುಂಬೆ ಘಾಟಿಯ 7ನೇ ತಿರುವು ಅತ್ಯಂತ ಅಪಾಯಕಾರಿ ತಿರುವು. ಶಿವಮೊಗ್ಗ ಜಿಲ್ಲೆ ವ್ಯಾಪ್ತಿಗೆ ಸೇರುವ ಈ ತಿರುವಿನಲ್ಲಿ ಅಪಘಾತಗಳು ಸಾಮಾನ್ಯ. ಇಲ್ಲಿ ಕಂದಕಕ್ಕೆ ಬಿದ್ದು ಹಲವರು ಸಾವನ್ನಪ್ಪಿದ್ದಾರೆ. ಆಗುಂಬೆ ಭಾಗದಲ್ಲಿ ಮಳೆಯಾಗುತ್ತಿದ್ದು ಚಾಲಕರು, ಪ್ರವಾಸಿಗರು ಸ್ವಲ್ಪ ಯಾಮಾರಿದರು ಅಪಘಾತ ನಿಶ್ಚಿತ.