ಶಿವಮೊಗ್ಗ ಲೈವ್.ಕಾಂ | SHIMOGA NEWS | 4 MAY 2021
ಒಂದು ಮಾತ್ರೆ ತರೋಕೆ ಮೂರು ಜನ. ಅಡ್ಮಿಟ್ ಆದವರನ್ನು ನೋಡಲು ಹೊರಟವರಿಗೆ ಪೇಷೆಂಟ್ ಹೆಸರೆ ಗೊತ್ತಿರಲಿಲ್ಲ. ಬ್ಯಾಂಕ್ ಉದ್ಯೋಗಿ ಎಂದು ಓಡಾಡುತ್ತಿದ್ದಾಕೆ ಬಳಿ ಐಡಿ ಕಾರ್ಡೆ ಇರಲಿಲ್ಲ..!
ಕರ್ಫ್ಯೂ ಅವಧಿಯಲ್ಲೂ ಕುವೆಂಪು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದ ಹಿನ್ನೆಲೆ ಪೊಲೀಸರು ದಿಢೀರ್ ತಪಾಸಣೆ ನಡೆದರು. ಆಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಒಬ್ಬೊಬ್ಬರು ಒಂದು ನೆಪ ಹೇಳಲು ಯತ್ನಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ನೇತೃತ್ವ
ಕುವೆಂಪು ರಸ್ತೆಯಲ್ಲಿ ಹಲವು ಆಸ್ಪತ್ರೆಗಳಿವೆ. ಆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಸ್ವಲ್ಪ ರಿಲೀಫ್ ನೀಡಲಾಗಿತ್ತು. ಆದರೆ ಇದನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಅನಗತ್ಯ ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಶಂಕೆ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಇನ್ಸ್ಪೆಕ್ಟರ್ಗಳಾದ ಕೆ.ಟಿ.ಗುರುರಾಜ್, ಹರೀಶ್ ಪಟೇಲ್, ಸಿದ್ದನಗೌಡ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇದರ ವಿಡಿಯೋ ವರದಿ ಇಲ್ಲಿದೆ.
ಒಬ್ಬೊಬ್ಬರದ್ದು ಒಂದೊಂದು ಕಾರಣ
ಜೈಲ್ ಸರ್ಕಲ್ನಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿ ವಾಹನದ ತಪಾಸಣೆ ನಡೆಸಲಾಯಿತು. ದ್ವಿಚಕ್ರ ವಾಹನದಲ್ಲಿ ಬಂದ ಮಹಿಳೆಯೊಬ್ಬರು ತಾವು ಬ್ಯಾಂಕ್ ಉದ್ಯೋಗಿ ಎಂದು ಹೇಳಿ, ಪೊಲೀಸ್ ತಪಾಸಣೆಯಿಂದ ವಿನಾಯಿತಿ ಕೇಳಿದರು. ಆದರೆ ಐಡಿ ಕಾರ್ಡ್ ತೋರಿಸುವಂತೆ ಸೂಚಿಸಿದಾಗ, ನಾನು ಹೊಸದಾಗಿ ಸೇರಿದ್ದೇನೆ ಎಂದು ಸಬೂಬು ಹೇಳಿದರು.
ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬರನ್ನು ವಿಚಾರಿಸಿದಾಗ, ಆಸ್ಪತ್ರೆಯಲ್ಲಿ ದಾಖಲಾಗಿರುವ ಪೇಷಂಟ್ ನೋಡಲು ತೆರಳುತ್ತಿರುವುದಾಗಿ ತಿಳಿಸಿದರು. ಅವರ ಹೆಸರು ಮರೆತು ಹೋಗಿದೆ ಎಂದರು.
ವಾಹನ ತಡೆದಿದ್ದಕ್ಕೆ ಹಿರಿಯ ನಾಗರಿಕರೊಬ್ಬರು ಟ್ರಾಫಿಕ್ ಇನ್ಸ್ಪೆಕ್ಟರ್ ವಿರುದ್ಧವೇ ತಿರುಗಿಬಿದ್ದರು. ನಡು ರಸ್ತೆಯಲ್ಲೇ ಜಗಳಕ್ಕಿಳಿದರು. ಜಿಲ್ಲಾ ರಕ್ಷಣಾಧಿಕಾರಿ ಅವರೆ ಮಧ್ಯಪ್ರವೇಶಿಸಿ ಕಾರಣ ತಿಳಿದು, ತಿಳಿ ಹೇಳಿ ಹಿರಿಯ ನಾಗರಿಕರನ್ನು ಕಳುಹಿಸಿದರು.
ಬಹುತೇಕರು ಆಸ್ಪತ್ರೆಯ ನೆಪ ಹೇಳುತ್ತಿದ್ದರು. ಮೆಡಿಕಲ್ ಶಾಪ್ಗೆ ಹೋಗಬೇಕು. ಅಗತ್ಯ ಸೇವೆ ಎಂದು ಕಾರಣಗಳನ್ನು ಹೇಳುತ್ತಿದ್ದರು. ಎಲ್ಲರ ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ಕೆಲವು ವಾಹನಗಳನ್ನು ವಶಕ್ಕೆ ಪಡೆದರು. ಮೋಟರ್ ವೆಹಿಕಲ್ ಕಾಯ್ದೆ ಉಲ್ಲಂಘಿಸಿದ ಕೆಲವರಿಗೆ ಸ್ಥಳದಲ್ಲಿ ದಂಡ ವಿಧಿಸಿದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]