ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021
ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಗರೀಕರು ಮತ್ತು ವರ್ತಕರು ಇವತ್ತು ಪ್ರತಿಭಟನೆ ನಡೆಸಿದರು. ಜೈಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು, ಗುಣಮಟ್ಟದ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಸಂಪರ್ಕ ಕೊಂಡಿಯೇ ಕಡಿತ
ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಪೈಕಿ ಜೈಲ್ ರಸ್ತೆಯೂ ಒಂದಾಗಿದೆ. ವಿವಿಧ ಬಡಾವಣೆ, ಪ್ರಮುಖ ರಸ್ತೆಗಳಿಗೆ ಈ ರಸ್ತೆಯು ಸಂಪರ್ಕ ಕೊಂಡಿಯಾಗಿದೆ. ವಿನೋಬನಗರ, ರಾಜೇಂದ್ರ ನಗರ, ಕುವೆಂಪು ರಸ್ತೆ, ಹೊಸಮನೆ, ವೆಂಕಟೇಶನಗರ, ಶರಾವತಿ ನಗರ ಸೇರಿದಂತೆ ವಿವಿಧ ಬಡಾವಣೆಗೆ ಈ ರಸ್ತೆಯ ಸಂಪರ್ಕ ಕಲ್ಪಿಸಲಿದೆ. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬದಿಂದಾಗಿ ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರಿಗಳು ಕಷ್ಟ ಕೇಳೋದ್ಯಾರು?
ಕಾಮಗಾರಿ ವಿಳಂಬ ವ್ಯಾಪಾರ, ವಹಿವಾಟಿನ ಮೇಲೂ ಪರಿಣಾಮ ಉಂಟ ಮಾಡುತ್ತಿದೆ. ಜೈಲ್ ರಸ್ತೆಯಲ್ಲಿರುವ ಮಳಿಗೆ, ಉದ್ಯಮಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಪ್ರತಿಭಟನಾಕರರು ಆಗ್ರಹಿಸಿದರು.
ಶಿವಮೊಗ್ಗ ಎಸ್.ಆರ್.ರಸ್ತೆ ನಿವಾಸಿಗಳು ಮತ್ತು ವರ್ತಕರ ಕ್ಷೇಮಾಭಿವೃದ್ದಿ ಸಂಘ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಉಪಾಧ್ಯಕ್ಷ ಬಿ. ಗೋಪಿನಾಥ್, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಜಂಟಿಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಬಿ.ಆರ್. ಸಂತೋಷ್, ಎಂ. ರಾಜು, ಜಗದೀಶ್ ಮಾತನವರ್, ಮರಿಸ್ವಾಮಿ, ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ ವಸಂತ್ಕುಮಾರ್, ಸತೀಶ್ಕುಮಾರ್ ಶೆಟ್ಟಿ, ಜೈಲ್ ರಸ್ತೆ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆ.ಜಿ. ವಿನೋದ್, ಪದಾಧಿಕಾರಿಗಳು, ವ್ಯಾಪಾರಿಗಳು, ನಾಗರೀಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.