ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MARCH 2021
ಶಿವಮೊಗ್ಗ ಮಹಾನಗರ ಪಾಲಿಕೆ ಬಜೆಟ್ ಮಂಡನೆ ವೇಳೆ ಇವತ್ತು ಗೊಂದಲ, ಗದ್ದಲ ಸೃಷ್ಟಿಯಾಯ್ತು. ಆಡಳಿತ ಮತ್ತು ವಿರೋಧ ಪಕ್ಷದ ಕಾರ್ಪೊರೇಟರ್ಗಳು ಘೋಷಣೆಗಳನ್ನು ಕೂಗಿದರು. ಈ ನಡುವೆ ಬಜೆಟ್ ಪ್ರತಿಯನ್ನ ಪೂರ್ಣವಾಗಿ ಓದಲು ಸಾದ್ಯವಾಗದ ಭಾಷಣ ಅರ್ಧಕ್ಕೆ ಮೊಟಕುಗೊಂಡಿತು.
ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಬಜೆಟ್ ಮಂಡಿಸಿದರು. ಬಜೆಟ್ ಪ್ರತಿಯನ್ನು ಓದಲು ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆಕ್ಷೇಪ ತೆಗೆದರು. ಕಳೆದ ಬಜೆಟ್ಗಳಲ್ಲಿ ಘೋಷಣೆಯಾದ ಹೊಸ ಯೋಜನೆಗಳನ್ನೇ ಈತನಕ ಪೂರ್ಣಗೊಳಿಸಿಲ್ಲ, ಈಗ ಮತ್ತಷ್ಟು ಯೋಜನೆಗಳನ್ನು ಘೋಷಿಸುತ್ತಿದ್ದೀರ ಎಂದು ಪ್ರಶ್ನಿಸಿದರು.
ಗದ್ದಲ, ಗೊಂದಲ, ಟೇಬಲ್ ಮುಂದೆ ಪ್ರತಿಭಟನೆ
ಯಮುನಾ ರಂಗೇಗೌಡ ಅವರಿಗೆ ವಿರೋಧ ಪಕ್ಷದ ಇತರೆ ಕಾರ್ಪೊರೇಟರ್ಗಳು ಬೆಂಬಲವಾಗಿ ನಿಂತರು. ಹಿಂದಿನ ಬಜೆಟ್ ವೇಳೆ ಘೋಷಣೆಯಾಗಿ, ಪೂರ್ಣಗೊಳ್ಳದ ಯೋಜನೆಗಳ ಪಟ್ಟಿ ಇರುವ ಫ್ಲೇಕರ್ ಹಿಡಿದು ಘೋಷಣೆ ಕೂಗಲು ಆರಂಭಿಸಿದರು. ಮೇಯರ್ ಟೇಬಲ್ ಮುಂಭಾಗ ಪ್ರತಿಭಟಿಸಿದರು.
‘ಜೈ ಶ್ರೀರಾಮ್’, ಕಳ್ಳ ಭಕ್ತರು ಘೋಷಣೆ
ಈ ವೇಳೆ ಬಿಜೆಪಿ ಕಾರ್ಪೊರೇಟರ್ಗಳು ಜೈ ಶ್ರೀರಾಮ್, ಭಾರತ್ ಮಾತಾ ಕೀ ಜೈ ಅಂತಾ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಕಾರ್ಪೊರೇಟರ್ಗಳು ‘ಕಳ್ಳ ಭಕ್ತರು’ ಎಂದು ಘೋಷಣೆ ಮೋಳಗಿದರು. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಘೋಷಣೆಯಿಂದಾಗಿ ಪಾಲಿಕೆ ಸಭಾಂಗಣದಲ್ಲಿ ಗೊಂದಲ ನಿರ್ಮಾಣವಾಯಿತು.
ಬಜೆಟ್ ಭಾಷಣ ಅರ್ಧಕ್ಕೆ ಕಟ್
ಗೊಂದಲ, ಗದ್ದಲ, ಘೋಷಣೆಗಳಿಂದಾಗಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಬಜೆಟ್ ಪ್ರತಿಯನ್ನು ಪೂರ್ತಿಯಾಗಿ ಓದಲಿಲ್ಲ. ಅರ್ಧಕ್ಕೆ ಬಜೆಟ್ ಭಾಷಣ ನಿಲ್ಲಿಸಬೇಕಾಯಿತು. ಬಳಿಕ ಅವರೂ ತಮ್ಮ ಪಕ್ಷದವರೊಂದಿಗೆ ಸೇರಿ ಘೋಷಣೆಗಳನ್ನು ಕೂಗಿದರು.
ವಿಡಿಯೋ ರಿಪೋರ್ಟ್ ಇಲ್ಲಿದೆ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]