SHIVAMOGGA LIVE NEWS | 6 DECEMBER 2022
ಶಿವಮೊಗ್ಗ : ಸಿಟಿ ಸೆಂಟರ್ ಮಾಲ್ (mall controversy) ಗುತ್ತಿಗೆ ಅವಧಿ ವಿವಾದ ಪುನಃ ಮುನ್ನಲೆಗೆ ಬಂದಿದೆ. ಮಹಾನಗರ ಪಾಲಿಕೆಯು ತನಿಖಾ ವರದಿ ಬಹಿರಂಗೊಳಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ಕರೆ ನೀಡಿದೆ. ಇತ್ತ ಇದೆ ವಿಷಯ ಮುಂದಿಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದೆ.
ಏನಿದು ವಿವಾದ?
ಸಿಟಿ ಸೆಂಟರ್ ಮಾಲ್ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ವಿಸ್ತರಿಸಬೇಕು ಎಂದು ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿತ್ತು. ಸ್ಥಾಯಿ ಸಮಿತಿಯಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಹಾಗಿದ್ದೂ ಈ ವಿಷಯ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಸೇರಿಕೊಂಡಿತ್ತು. ಇದು ವಿವಾದಕ್ಕೆ (mall controversy) ಕಾರಣವಾಗಿತ್ತು.
ಸಾಮಾನ್ಯ ಸಭೆಯಲ್ಲಿ ಕೋಲಾಹಲ
ಸಿಟಿ ಸೆಂಟರ್ ಮಾಲ್ (mall controversy) ಗುತ್ತಿಗೆ ಅವಧಿ ವಿಸ್ತರಣೆ ವಿಚಾರ ಅಜೆಂಡಾದಲ್ಲಿ ಸೇರ್ಪಡೆಯಾಗಿದ್ದು ಹೇಗೆ ಎಂದು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಲಾಯಿತು. ಈ ವೇಳೆ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಮೇಯರ್ ತಿಳಿಸಿದ್ದರು. ಉಳಿದ ಸದಸ್ಯರು ಕೂಡ ಇದೆ ವಾದ ಮಂಡಿಸಿದ್ದರು. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಆರ್.ಪ್ರಸನ್ನಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸ್ಥಾಯಿ ಸಮಿತಿ ವಿರೋಧಿಸಿದ್ದರು ಸಾಮಾನ್ಯ ಸಭೆ ಅಜೆಂಡಾದಲ್ಲಿ ವಿಷಯ ಬಂದಿದ್ದು ಹೇಗೆ ಪ್ರಶ್ನಿಸಿದ್ದರು.
ತನಿಖಾ ಸಮಿತಿ ರಚನೆ
ಯಾರ ಗಮನಕ್ಕು ಬಾರದೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ವಿಷಯ ಸೇರ್ಪಡೆಯಾಗಿದ್ದರ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ತನಿಖೆ ಪೂರ್ಣಗೊಂಡಿದ್ದು, ವರದಿಯನ್ನು ಮಹಾನಗರ ಪಾಲಿಕೆಗೆ ಸಲ್ಲಿಸಲಾಗಿದೆ. ಆದರೆ 5 ತಿಂಗಳು ಕಳೆದರು ವರದಿ ಬಹಿರಂಗಗೊಳಿಸಿಲ್ಲ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ – ಸಿಟಿ ಸೆಂಟರ್ ಮಾಲ್ ಕೇಸ್, ಪಾಲಿಕೆಗೆ ಒಂದು ವಾರದ ಗಡುವು, ಏನಿದು ಪ್ರಕರಣ?
ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್
ವರದಿ ಬಹಿರಂಗಗೊಳಿಸದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಹೋರಾಟಕ್ಕೆ ಮುಂದಾಗಿದೆ. ಮೇಯರ್ ಕಚೇರಿ ಮುಂದೆ ಪ್ರತಿಭಟಿಸಲು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ತೀರ್ಮಾನಿಸಿದ್ದಾರೆ.
ಅಹೋರಾತ್ರಿ ಧರಣಿಯ ಎಚ್ಚರಿಕೆ
ಇನ್ನೊಂದೆಡೆ ಆಮ್ ಆದ್ಮಿ ಪಕ್ಷ ಇದೆ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಜ್ಜಾಗಿದೆ. ತನಿಖಾ ವರದಿ ಬಹಿರಂಗಗೊಳಿಸದೆ ಇದ್ದರ ಅಹೋರಾತ್ರಿ ಹೋರಾಟ ನಡೆಸಲಾಗುತ್ತದೆ ಎಂದು ಪಕ್ಷ ಸಂಚಾಲಕ ಬಿ.ಆರ್.ಮನೋಹರಗೌಡ ಒತ್ತಾಯಿಸಿದ್ದಾರೆ.