ಶಿವಮೊಗ್ಗ ಲೈವ್.ಕಾಂ | RIPPONPETE NEWS | 30 JUNE 2021
ಬಸ್ ನಿಲ್ದಾಣದ ಪಕ್ಕದ ಮಳಿಗೆಗೆ ಮದ್ಯದಂಗಡಿ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು, ಸರ್ವ ಪಕ್ಷಗಳ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಹರತಾಳು ಸಮ್ಮುಖದಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ.
ರಿಪ್ಪನ್ಪೇಟೆಯ ಬರುವೆ ಗ್ರಾಮದ ಬಾರ್ ಅಂಡ್ ರೆಸ್ಟೋರೆಂಟ್ ಒಂದನ್ನು ವಿನಾಯಕ ವೃತ್ತದ ಬಸ್ ನಿಲ್ದಾಣ ಪಕ್ಕದ ಮಳಿಗೆಗೆ ಶಿಫ್ಟ್ ಮಾಡಲಾಗಿದೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು. ಹಾಗಾಗಿ ಬಾರ್ ಮುಂದೆಯೇ ಪೆಂಡಾಲು ಹಾಕಿ ಪ್ರತಿಭಟನೆ ನಡೆಸಿದರು.
ಸ್ಥಳೀಯರ ವಿರೋಧಕ್ಕೆ ಕಾರಣವೇನು?
ಬಸ್ ನಿಲ್ದಾಣದ ಪಕ್ಕದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆಗೆಯುವುದು ಸರಿಯಲ್ಲ. ಬಸ್ಸಿಗಾಗಿ ಕಾದು ಕೂರುವ ವಿದ್ಯಾರ್ಥಿಗಳು, ಮಹಿಳೆಯರು ಭಾರಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಮೀಪದಲ್ಲೆ ಮಸೀದಿಯು ಇದೆ. ಹಾಗಾಗಿ ಬಾರ್ ಇರಲು ಇದು ಸರಿಯಾದ ಸ್ಥಳವಲ್ಲ ಅಂತಾ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರಿಗೆ ಶಾಸಕರ ಬೆಂಬಲ
ಸ್ಥಳಿಯರ ಪ್ರತಿಭಟನೆಗೆ ಶಾಸಕ ಹರತಾಳು ಹಾಲಪ್ಪ ಬೆಂಬಲ ವ್ಯಕ್ತಪಡಿಸಿದರು. ಜನರು ವಿರೋಧದ ನಡುವೆ ಇಲ್ಲಿ ಬಾರ್ ಇರುವುದು ಸರಿಯಾದ ಕ್ರಮವಲ್ಲ ಎಂದರು. ಸ್ಥಳಕ್ಕೆ ಬಂದ ಅಬಕಾರಿ ಉಪ ಆಯುಕ್ತ ಕ್ಯಾ. ಅಜಿತ್ ಕುಮಾರ್ ಅವರೊಂದಿಗೂ ಚರ್ಚೆ ನಡೆಸಿದರು.
ಬಾರ್ ಸ್ಥಳಾಂತರಕ್ಕೆ ಒಪ್ಪಿಗೆ
ಇದೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಾರ್ ಮಾಲೀಕರು, ಜನರ ವಿರೋಧದ ನಡುವೆ ಇಲ್ಲಿ ವ್ಯಾಪಾರ ನಡೆಸುವುದಿಲ್ಲ. ಬರುವೆ ಗ್ರಾಮಕ್ಕೆ ತಮ್ಮ ಬಾರ್ ಪುನಃ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ತಮ್ಮ ಬಾರ್ಗೆ ಸಂಪರ್ಕ ರಸ್ತೆ ಬೇಕಿದೆ ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಪ್ರಮುಖರಾದ ಗೋಪಾಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ನಾಗರತ್ನಮ್ಮ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200