ಡಲ್ ಹೊಡೆಯುತ್ತಿದೆ ವ್ಯಾಪಾರ
ರಣ ಬಿಸಿಲಿನಿಂದಾಗಿ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟು ಕುಂಟಿತವಾಗಿದೆ. ಸಾಮಾನ್ಯವಾಗಿ ನಗರದಲ್ಲಿ 10 ಗಂಟೆ ನಂತರ ವಹಿವಾಟು ಆರಂಭವಾಗುತ್ತದೆ. ಈ ಹೊತ್ತಿಗಾಗಲೆ ಮೈಸುಡುವ ಬಿಸಿಲಿರುತ್ತದೆ. ಹಾಗಾಗಿ ಬೆಳಗ್ಗೆಯಿಂದಲೇ ವ್ಯಾಪಾರ ಡಲ್ ಹೊಡೆಯುತ್ತದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಸಂಜೆವರೆಗೂ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಗಾಂಧಿ ಬಜಾರ್, ನೆಹರೂ ರಸ್ತೆಯಲ್ಲಿ ಜನರ ಸಂಚಾರ ತುಂಬಾ ಕಡಿಮೆಯಾಗಿದೆ.
ಪಾನಿಯಗಳು, ಐಸ್ ಕ್ರೀಂ, ಎಳನೀರಿಗೆ ಬೇಡಿಕೆ
ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಜನರು ತಂಪು ಪಾನಿಯಗಳು, ಐಸ್ ಕ್ರೀಂ, ಎಳನೀರು, ಹಣ್ಣುಗಳ ಮೊರೆ ಹೋಗಿದ್ದಾರೆ. ಬೇಕರಿ ಮತ್ತು ಅಂಗಡಿಗಳಲ್ಲಿ ಕೂಲ್ ಡ್ರಿಂಕ್ಸ್ ಮತ್ತು ಕೋಲ್ಡ್ ವಾಟರ್ಗೆ ಡಿಮಾಂಡ್ ಹೆಚ್ಚಿದೆ. ಜೂಸ್ ಸೆಂಟರ್ಗಳಲ್ಲಿ ಐಸ್ ಹಾಕಿದ ಜೂಸ್ಗಳಿಗೆ ಬೇಡಿಕೆ ಇದೆ. ಇನ್ನು, ಐಸ್ ಕ್ರೀಂ ಪಾರ್ಲರ್ಗಳಲ್ಲು ಜನರ ಸಂಖ್ಯೆ ಹೆಚ್ಚಿದೆ. ಎಳನೀರಿನ ಬೇಡಿಕೆ ಮೂರು ಪಟ್ಟು ಹೆಚ್ಚಿದೆ. ದೊಡ್ಡ ವ್ಯಾಪಾರಿಗಳ ಹೊರತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಎಳನೀರು ದೊರೆಯುತ್ತಿಲ್ಲ ಎಂಬ ಆರೋಪವಿದೆ.