ಶಿವಮೊಗ್ಗ ಲೈವ್.ಕಾಂ | LAKKINAKOPPA NEWS | 27 JUNE 2021
ಲಕ್ಕಿನಕೊಪ್ಪದಲ್ಲಿ ಆನೆಗಳು ದಾಳಿ ಮಾಡಿ ಬೆಳೆ ನಷ್ಟ ಉಂಟು ಮಾಡಿವೆ. ಬಾಳೆ, ಅಡಕೆ ಮರಗಳನ್ನು ನಾಶ ಮಾಡಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಕಳುಹಿಸಲು ನಿರ್ಲಕ್ಷ ತೋರಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.
![]() |
ಲಕ್ಕಿನಕೊಪ್ಪದ ತೋಟ, ಗದ್ದೆಗಳ ಮೇಲೆ ತಡ ರಾತ್ರಿ ಆನೆಗಳು ದಾಳಿ ಮಾಡಿವೆ. ಬಾಳೆ ಗಿಡ, ಅಡಕೆ ಮರಗಳು ಬುಡಮೇಲಾಗಿವೆ. ಆನೆಗಳ ದಾಳಿಯಿಂದಾಗಿ ಲಕ್ಕಿನಕೊಪ್ಪ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
‘ಆನೆಗಳು ಇದು ನಾಲ್ಕನೆ ಬಾರಿಗೆ ನನ್ನ ತೋಟದ ಮೇಲೆ ದಾಳಿ ಮಾಡಿವೆ. ನಾಲ್ಕು ಎಕರೆಯಲ್ಲಿ ಬಾಳೆ, ಅಡಕೆ ಬೆಳೆದಿದ್ದೀನಿ. ಈಗ ಆನೆಗಳಿಂದಾಗಿ ಬೆಳೆ ನಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋಗುತ್ತಾರೆ ಬಿಟ್ಟರೆ, ಮತ್ತಿನ್ನೇನನ್ನೂ ಮಾಡುವುದಿಲ್ಲ’ ಅನ್ನುತ್ತಾರೆ ರೈತ ಅರುಣ್.
ಅಧಿಕಾರಿಗಳು ಸ್ಥಳಕ್ಕೆ ದೌಡು
ಆನೆ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ದಾಳಿ ಮತ್ತು ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ
ಭದ್ರಾ ಅಭಯಾರಣ್ಯದಿಂದ ಆನೆಗಳು ಈ ಭಾಗಕ್ಕೆ ಬಂದಿವೆ. ಭದ್ರಾ ಹಿನ್ನೀರು ದಾಟಿ ಮಾರಿದಿಬ್ಬದ ಕಡೆಯಿಂದ ಬಂದಿರುವ ಆನೆಗಳು, ಉಂಬ್ಳೆಬೈಲು ಅರಣ್ಯ ವಲಯ ವ್ಯಾಪ್ತಿಯ ಹಳ್ಳಿಗಳಲ್ಲಿ ದಾಳಿ ಮಾಡುತ್ತಿವೆ. ಬೆಳೆಯನ್ನು ಸ್ವಾಹ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಆನೆಗಳು ಕಾಕನ ಹಸೂಡಿ, ಉಂಬ್ಳೆಬೈಲು, ಲಕ್ಕಿನಕೊಪ್ಪದ ವಿವಿಧೆಡೆ ನಿರಂತರ ಸಂಚರಿಸುತ್ತಿವೆ. ಇದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ.
ಶಂಕರಘಟ್ಟ ಬಳಿ ಪ್ರತ್ಯಕ್ಷವಾಗಿದ್ದವು
ಕಳೆದ ವಾರ ಆನೆಯೊಂದು ಶಂಕರಘಟ್ಟ ಸಮೀಪದ ಗೋಣಿಬೀಡು ಗ್ರಾಮದ ಬಳಿ ಪ್ರತ್ಯಕ್ಷವಾಗಿತ್ತು. ಅರಣ್ಯ ವ್ಯಾಪ್ತಿಯಿಂದ ಗ್ರಾಮದ ವ್ಯಾಪ್ತಿಗೆ ಬರಲು ಆನೆ ಪ್ರಯತ್ನಿಸಿತ್ತು. ಆದರೆ ಅರಣ್ಯ ಇಲಾಖೆಯ ಟ್ರೆಂಚ್ನಿಂದಾಗಿ, ಆನೆ ಅದನ್ನು ದಾಟಲಾಗದೆ ನಿಂತಿತ್ತು. ಸ್ಥಳಕ್ಕೆ ಬಂದಿದ್ದ ಅರಣ್ಯಾಧಿಕಾರಿಗಳು ಪಟಾಕಿ ಹೊಡೆದು ಆನೆಯನ್ನು ಕಾಡಿಗಟ್ಟಿದ್ದರು.
ಅಭಯಾರಣ್ಯಕ್ಕೆ ಅಟ್ಟುವ ಕಾರ್ಯ ವಿಫಲ
ಉಂಬ್ಳೆಬೈಲು ವಲಯ ವ್ಯಾಪ್ತಿಯ ಗ್ರಾಮಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳ ಉಪಟಳ ತಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಸಕ್ರೆಬೈಲಿನಿಂದ ಸಾಕಾನೆಗಳನ್ನು ಕರೆತಂದು, ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಹಿಮ್ಮೆಟ್ಟಿಸುವ ಪ್ರಯತ್ನವಾಗಿತ್ತು. ಆನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಆದರೆ ಕಾಡಾನೆಗಳು ಪುನಃ ಪ್ರತ್ಯಕ್ಷವಾಗಿದ್ದು, ತೋಟ, ಗದ್ದೆಗಳ ಮೇಲೆ ದಾಳಿ ಮಾಡುತ್ತಿವೆ. ಈಗ ಗ್ರಾಮಸ್ಥರು ಆತಂಕ ಮತ್ತು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ | ಉಂಬ್ಳೆಬೈಲು ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಕಾಣಿಸಿದ ಕಾಡಾನೆ, ಲಕ್ಕಿನಕೊಪ್ಪದಲ್ಲಿ ತೋಟಕ್ಕೆ ದಾಳಿ
ಇದನ್ನೂ ಓದಿ | ಅಪರೇಷನ್ ಮುಗಿದು ವಾರ ಕಳೆಯೋದರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ, ತೋಟಗಳಿಗೆ ದಾಳಿ
ಇದನ್ನೂ ಓದಿ | ಶಂಕರಘಟ್ಟ ಸಮೀಪದ ಗೋಣಿಬೀಡು ಬಳಿ ಕಾಡಾನೆ ಪ್ರತ್ಯಕ್ಷ
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200